ಶಿವಮೊಗ್ಗ :- ಶಿವಮೊಗ್ಗ ರಂಗಾಯಣವು ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಸೆ. 21, 22, ಮತ್ತು 23 ರಂದು ಮೂರು ದಿನಗಳ ‘ನಾಟಕೋತ್ಸವ’ ಹಮ್ಮಿಕೊಂಡಿದೆ ಎಂದು ಶಿವಮೊಗ್ಗ ರಂಗಾಯಣದ ನೂತನ ನಿರ್ದೇಶಕ ಡಿ.ಪ್ರಸನ್ನ ತಿಳಿಸಿದರು.

ಇಂದು ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂರು ದಿನಗಳ ಕಾಲ ನಾಟಕೋತ್ಸವವನ್ನು ಇಲ್ಲಿಯ ಅಶೋಕನಗರದಲ್ಲಿನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದೆ ಎಂದರು.
ದಿ.೨೧ ಶನಿವಾರ ಸಂಜೆ 6.30ಕ್ಕೆ ರಂಗಸಮಾಜದ ಸದಸ್ಯರು ಮತ್ತು ರಂಗಕರ್ಮಿಗಳಾದ ಮಹಾಂತೇಶ್ ಗಜೇಂದ್ರಗಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಂಗಸಮಾಜದ ಸದಸ್ಯ ರಾಜಪ್ಪ ದಳವಾಯಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ.ಸಾಗರ ವಹಿಸಲಿದ್ದಾರೆ. ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ.ಸಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದ ನಂತರ ಸುಸ್ಥಿರ ಪ್ರತಿಷ್ಠಾನ, ಬೆಂಗಳೂರು ಇವರ ಪ್ರಸ್ತುತಿಯ ಜೋಸೆಫ್ ಜಾನ್ ನಿರ್ದೇಶನದ ‘ಸರಸ ವಿರಸ ಸಮರಸ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದ ಅವರು ದಿ. 22ರ ಭಾನುವಾರ ಸಂಜೆ ೬.೩೦ಕ್ಕೆ ಆಟಮಾಟ, ಸಾಂಸ್ಕೃತಿಕ ಪಥ ಧಾರವಾಡ ಇವರ ಪ್ರಸ್ತುತಿಯ ಮಹಾದೇವ ಹಡಪದ ಇವರ ರಂಗರೂಪ ಮತ್ತು ಪರಿಕಲ್ಪನೆಯ ವಿಶ್ವರಾಜ ರಾಜಗುರು ಅಭಿನಯದ ‘ನಾ ರಾಜಗುರು’ ನಾಟಕ ಪ್ರದರ್ಶನವು ನಡೆಯಲಿದೆ ಎಂದರು.
ದಿ. 23 ರ ಸೋಮವಾರ ಸಂಜೆ 6.30ಕ್ಕೆ ಒಡೋಲಗ ರಂಗಪರ್ಯಟನ, ಹಿತ್ಲಕೈ ಪ್ರಸ್ತುತಿ ಮತ್ತು ಅವರದೇ ನಿರ್ದೇಶನದ ವಿವೇಕ ಶಾನಬೋಗ ರಚನೆಯ ‘ಬಹುಮುಖಿ’ ನಾಟಕವು ಪ್ರದರ್ಶನಗೊಳ್ಳಲಿದೆ. ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಪ್ರತಿ ನಾಟಕಕ್ಕೆ 30 ರೂ. ಪ್ರವೇಶ ಶುಲ್ಕವಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ಅವರು ವಿನಂತಿಸಿದರು.
ರಂಗಾಯಣ ಜನ ರಂಗಾಯಣವಾಗಬೇಕು. ತಾವು ಅಧಿಕಾರ ವಹಿಸಿಕೊಂಡ ಬಳಿಕ ಹೊಸ ಪ್ರಯೋಗಗಳನ್ನು ಮಾಡುವ ಚಿಂತನೆ ನಡೆದಿದೆ. ವೃತ್ತಿ ಹಾಗೂ ಹವ್ಯಾಸಿ ರಂಗ ತಂಡಗಳ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ. ಜನರು ಹೆಚ್ಚು ಹೆಚ್ಚು ನಾಟಕಗಳನ್ನು ನೋಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ರಂಗಾಸಕ್ತರಿಂದ ದೇಣಿಗೆ ಬೆಂಬಲವನ್ನೂ ಅಪೇಕ್ಷಿಸುತ್ತೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾ, ರಂಗಕರ್ಮಿ ಕಾಂತೇಶ ಕದರಮಂಡಲಗಿ ಉಪಸ್ಥಿತರಿದ್ದರು.