
ಸಾಗರ :- ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಸಿಗಂದೂರಿಗೆ ತೆರಳುವ ಶರಾವತಿ ನದಿ ಸೇತುವೆ ಬಹುತೇಕ ಪೂರ್ಣಗೊಂಡಿದೆ. ಸೇತುವೆ ಸಂಪೂರ್ಣ ಉದ್ದದ ಡ್ರೋಣ್ ಫೋಟೊವೊಂದನ್ನು ಸಂಸದ ಬಿ.ವೈ.ರಾಘವೇಂದ್ರ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಸಖತ್ ವೈರಲ್ ಆಗುತ್ತಿದೆ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರು ಕುಟುಂಬ ಸಹಿತ ಸಿಗಂದೂರು ದೇಗುಲಕ್ಕೆ ಭೇಟಿ ನೀಡಿದ್ದರು. ಆಗ ಮಾತನಾಡಿದ್ದ ಸಂಸದ ರಾಘವೇಂದ್ರ, 2025ರ ಏಪ್ರಿಲ್ ತಿಂಗಳಲ್ಲಿ ಸಿಗಂದೂರು ಸೇತುವೆ ಉದ್ಘಾಟನೆ ಆಗಲಿದೆ. ಇದು ದೇಶದ ಎರಡನೆ ಅತಿ ಉದ್ದದ ಸೇತುವೆಯಾಗಿದೆ. ಇದರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದರು.
ಆಗ ಅವರು ಮಾತನಾಡುವಾಗ ಸೇತುವೆಯ ಕಾಮಗಾರಿ ಅರ್ಧ ದಲ್ಲಿತ್ತು. ಆದರೆ ವೇಗ ಪಡೆದಿರುವ ಸೇತುವೆ ಕಾಮಗಾರಿ ಇದೀಗ ಪೂರ್ಣ ಹಂತಕ್ಕೆ ಬಂದು ನಿಂತಿದೆ. ಇದರ ಪೋಟೋವನ್ನು ಶೇರ್ ಮಾಡುವ ಮೂಲಕ ಸಂಸದ ರಾಘವೇಂದ್ರರವರು, ಶೀಘ್ರ ಉದ್ಘಾಟನೆಯ ಭರವಸೆ ಈಡೇರಿಸುವ ಸಾಧ್ಯತೆಗಳಿವೆ ಎಂದಿದ್ದಾರೆ.
ಈ ಸೇತುವೆ ಸಂಪೂರ್ಣ ಗೊಂಡ ನಂತರ ಕತ್ತಲಲ್ಲಿ ಬದುಕು ಕಳೆಯುತ್ತಿರುವ ಶರಾವತಿ ಹಿನ್ನೀರಿನ ಪ್ರದೇಶವಾದ ತುಮರಿ ಭಾಗಕ್ಕೆ ಸಂಪರ್ಕ ಕೊಂಡಿ ಜೊತೆಗೆ ಅಭಿವೃದ್ಧಿ ಸಹ ಸಾಧ್ಯವಾಗಲಿದ್ದು , ವೈದ್ಯಕೀಯ ಸೇವೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪಡೆಯಲು ಪರದಾಡುತಿದ್ದ ಜನರಿಗೆ ಸಹಾಯ ಆಗಲಿದೆ.
ಇನ್ನು ಸಿಗಂದೂರಿಗೆ ತೆರಳುವ ಭಕ್ತರಿಗೆ ಹೆಚ್ಚು ಅನುಕೂಲ ಸಹ ಆಗಲಿದೆ. ಈ ಸೇತುವೆ ಮೂಲಕ ಕೊಲ್ಲೂರು, ಉಡುಪಿ ಭಾಗಕ್ಕೆ ಯಾವಾಗ ಬೇಕಾದರೂ ಪಯಣಿಸಲು ಅನುಕೂಲ ಆಗಲಿದೆ.