
ಶಿವಮೊಗ್ಗ :- ರಾಜ್ಯದ ಪೌರಾಡಳಿತ ಇಲಾಖೆಯ ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಕಂಪ್ಯೂಟರ್ ನೆಟ್ ವರ್ಕ್ ಕಳೆದ ಎರಡು ತಿಂಗಳಿಂದ ಸಂಪೂರ್ಣ ನಿಂತು ಹೋಗಿದ್ದು ನಾಗರಿಕರಿಗೆ ತೀವು ತೊಂದರೆ ಆಗುತ್ತಿದ್ದರೂ ನಿರ್ಲಕ್ಷ್ಯ ವಹಿಸಿದ ಪೌರಾಡಳಿತದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ಹಿತರಕ್ಷಣಾ ಸಮಿತಿಗಳ ಒಕ್ಕೂಟ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತಕುಮಾರ್, ಪೌರಾಡಳಿತ ಇಲಾಖೆಯ ಕಂಪ್ಯೂಟರ್ ನೆಟ್ ವರ್ಕ್ ಕಳೆದ ಎರಡು ತಿಂಗಳಿಂದ ಕೆಟ್ಟು ಹೋಗಿ ನಾಗರಿಕರಿಗೆ ತೀವು ತೊಂದರೆ ಆಗುತ್ತಿದೆ. ಆದರೂ ಪೌರಾಡಳಿತ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಹಿರಿಯ ಅಧಿಕಾರಿಗಳು ಸಮಸ್ಯೆ ಗೊತ್ತಿದ್ದರೂ ಯಾವುದೇ ಕ್ರಮವನ್ನು ವಹಿಸುತ್ತಿಲ್ಲ. ನಾಗರಿಕರಿಗೆ, ಮನೆ ಕಟ್ಟುವವರಿಗೆ, ವಾಣಿಜ್ಯ ಕಟ್ಟಡ ಕಟ್ಟುವವರಿಗೆ ಲೈಸೆನ್ಸ್ ಗಳು, ಇತರೆ ದಾಖಲೆಗಳು ಸಿಗದೆ ತೀವ್ರ ಅನುಭವಿಸುತ್ತಿದ್ದಾರೆ. ಅದರಲ್ಲೂ ಸಾಲ-ಸೋಲ ಮಾಡಿರುವವರ ಸ್ಥಿತಿ ಹೇಳತೀರದಾಗಿದೆ.
ಆದುದರಿಂದ ನಿರ್ಲಕ್ಷ್ಯ ವಹಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದು ಕೊಂಡು, ತಕ್ಷಣ ಬವಣೆ ತಪ್ಪಿಸಲು ಪೌರಾಡಳಿತ ಇಲಾಖೆಯ ಕಾರ್ಯದರ್ಶಿಗಳಿಗೆ ತಾವು ಸೂಕ್ತ ಸೂಚನೆ ನೀಡುವಂತೆ ಅವರು ಆಗ್ರಹಿಸಿದ್ದಾರೆ.