
ಶಿವಮೊಗ್ಗ :- ನಗರದ ಪ್ರತಿಷ್ಠಿತ ಗಾಂಧಿ ಪಾರ್ಕ್ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಸುಮಾರು ೮.೫ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಮತ್ತು ಸೈನ್ಸ್ ಪಾರ್ಕ್(ವೈಲ್ಡ್ ಲೈಫ್ ಇನ್ ಸ್ಪಿರೇಷನ್ ಸೆಂಟರ್) ನಿರ್ಮಾಣ ಮಾಡುತ್ತಿದ್ದು, ಇಂದು ಬೆಳಗ್ಗೆ ಶಾಸಕ ಚನ್ನಬಸಪ್ಪ ಅವರು ಅಭಿವೃದ್ಧಿ ಕಾಮಗಾರಿಯನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.
ಸುಮಾರು ೫ ವರ್ಷಗಳಿಂದ ಈ ಅಭಿವೃದ್ಧಿ ಕಾಮಗಾರಿ ಕುಂಟುತ್ತಾ ಸಾಗಿದ್ದು, ಪೂರ್ಣ ಪ್ರಮಾಣದಲ್ಲಿ ಮುಗಿಯದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ವಾಸ್ತವಸ್ಥಿತಿ ಪರಿಶೀಲಿಸಿ ವಿಳಂಬಕ್ಕೆ ಕಾರಣ ಮತ್ತು ಮುಂದೆ ಯಾವ ರೀತಿ ಅಭಿವೃದ್ಧಿಗೊಳಿಸಬೇಕು ಎಂಬುದನ್ನು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತ ಗುತ್ತಿಗೆದಾರ ಕಾಮಗಾರಿ ನಿಲ್ಲಿಸಿದ್ದು, ಆತನಿಗೆ ಈಗಾಗಲೇ ೪ಕೋಟಿ ರೂ. ನೀಡಲಾಗಿದ್ದು, ಇನ್ನೂ ಚರಂಡಿ, ವಿದ್ಯುದೀಕರಣ, ಎಸಿ, ಶೌಚಾಲಯ ಸೇರಿದಂತೆ ಅನೇಕ ಕಾಮಗಾರಿ ಬಾಕಿ ಇದ್ದು, ಆತನ ಟೆಂಡರ್ ರದ್ದುಗೊಳಿಸಿ ಮತ್ತೆ ಪುನಃ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಈ ಪಾರ್ಕ್ನಲ್ಲಿ ಅತ್ಯಾಧುನಿಕ ವ್ಯಸವ್ಥೆ ಇದ್ದು, ಸಾರ್ವಜನಿಕರು ತಮ್ಮ ಕುಟುಂಬದೊಂದಿಗೆ ನೋಡಬೇಕಾದ ಎಲ್ಲಾ ವಿಷಯಗಳಿವೆ. ವನ್ಯಜೀವಿ ವಿಭಾಗ ನಾಡಿನ ಗಣ್ಯ ವ್ಯಕ್ತಿಗಳು, ಶರಣರ ಪರಿಚಯ, ಶಾಸನಗಳು, ರಾಜಮನೆತನಗಳು, ಶಿವಮೊಗ್ಗ ಜಿಲ್ಲೆಯ ವಿಶೇಷತೆಗಳು, ಕೃಷಿ, ಇಂಧನ, ಆಮ್ಲಜನಕ ಮತ್ತು ಕಾರ್ಬನ್ ಡೈ ಆಕ್ಸೈಡ್ ಮತ್ತು ವಾತಾವರಣದಲ್ಲಿನ ಉಷ್ಣತೆ ಎಲ್ಲವನ್ನೂ ಸೂಚಿಸುವ ಯಂತ್ರಗಳು ಈ ಪಾರ್ಕ್ನಲ್ಲಿವೆ. ಆದಷ್ಟು ಬೇಗ ಕನಿಷ್ಟ ಮೂರು ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ಸ್ಮಾರ್ಟ್ಸಿಟಿ ಎಂಡಿ ರಾಜಣ್ಣ, ಎಇಇ ಕೃಷ್ಣಪ್ಪ, ಪಾಲಿಕೆ ಅಧಿಕಾರಿಗಳು ಇದ್ದರು.