google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಈಗಿರುವ ಶಾಖೆಗಳ ಜೊತೆಗೆ ಇನ್ನೂ ಮೂರು ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದ್ದು, ಇದೆ ತಿಂಗಳು ಚಾಲನೆ ನೀಡಲಾಗುವುದು ಎಂದು ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ತಿಳಿಸಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, 22 ಹೊಸ ಶಾಖೆಗಳನ್ನು ತೆರೆಯಲು ಅನುಮತಿ ಕೋರಿದ್ದು, ಈಗ ಮೂರು ಶಾಖೆಗಳಿಗೆ ಆರ್‌ಬಿಐ ಅನುಮತಿ ನೀಡಿದೆ ಎಂದ ಅವರು, ಡಿ. 6ರಂದು ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ 29ನೇ ಶಾಖೆಯನ್ನೂ ಡಿ. 12ರಂದು ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪದಲ್ಲಿ 30ನೇ ಶಾಖೆಯನ್ನೂ ಹಾಗೂ ಡಿ.೧೮ರಂದು ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳಿನಲ್ಲಿ 31ನೇ ಶಾಖೆಯನ್ನೂ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. ವಿಧಾನಮಂಡಲದ ಅಧಿವೇಶನದ ಬಳಿಕ ವಿದ್ಯುಕ್ತವಾಗಿ ಈ ಶಾಖೆಗಳನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

2023-24ನೇ ಸಾಲಿನಲ್ಲಿ ಒಟ್ಟು 17.99 ಕೋಟಿ ರೂ.ಲಾಭ ಗಳಿಸಿದ ಬ್ಯಾಂಕ್ 10.58 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 138.98 ಕೋಟಿ ಷೇರು ಬಂಡವಾಳ ಹೊಂದಿದ್ದಲ್ಲದೆ, 67.46 ಕೋಟಿ ರೂ.ನಿಧಿಗಳನ್ನು ಹೊಂದಿದೆ. 2332.2 ಕೋಟಿ ರೂ.ದುಡಿಯುವ ಬಂಡವಾಳ ಹೊಂದಿದ್ದು, 1462.78 ಕೋಟಿ ರೂ.ಠೇವಣಿ ಸಂಗ್ರಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 50383 ರೈತರಿಂದ 22.60 ಕೋಟಿ ರೂ. ವಿಮಾ ಪ್ರೀಮಿಯಂ ಪಾವತಿಯಾಗಿದ್ದು, ಇದರಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಒಂದರಿಂದಲೇ 23094 ರೈತರಿಂದ 10.13 ಕೋಟಿ ರೂ. ಜಮಾ ಪಡಿಸಲಾಗಿದೆ ಎಂದ ಅವರು, ಬೆಳೆ ವಿಮೆ ಯೋಜನೆಯಡಿ 62887 ರೈತರಿಂದ 26.73 ಕೋಟಿ. ರೂ. ವಿಮಾ ಪ್ರೀಮಿಯಂ ಪಾವತಿಯಾಗಿದೆ. ಇದರಲ್ಲಿ ತಮ್ಮ ಬ್ಯಾಂಕಿನ ಮೂಲಕವೇ 24822 ರೈತರಿಂದ 10.83 ಕೋಟಿ ರೂ. ಜಮಾ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಬಾರ್ಡ್ ಪುನರ್ಧನ ಸೌಲಭ್ಯ ಕಡಿತಗೊಂಡಿದ್ದಾಗಿಯೂ 2024-25ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ 120000 ರೈತರಿಗೆ 1200 ಕೋಟಿ ರೂ. ಅಲ್ಪವಾವಧಿ ಕೃಷಿ ಬೆಳೆ ಸಾಲದ ಗುರಿಯನ್ನು ಹೊಂದಿದ್ದು, ಪ್ರಸ್ತುತ 105640 ರೈತರಿಗೆ 1180.12ಕೋಟಿ ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.99.07ರಷ್ಟಿರುತ್ತದೆ ಎಂದು ತಿಳಿಸಿದರು.

ಬೆಳೆ ವಿಮೆ ಕಂಪನಿಯವರು ಎಲ್ಲಿದ್ದಾರೆ ಗೊತ್ತಿಲ್ಲ. ಈ ಕುರಿತು ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿಯವರಿಗೂ ತಿಳಿದಿಲ್ಲ. ಆದುದ್ದರಿಂದ ಜಿಲ್ಲೆಯಲ್ಲಿ ಸಂಬಂಧಿಸಿದ ಬೆಳೆ ವಿಮಾ ಕಂಪನಿಯ ಶಾಖೆಯೊಂದನ್ನು ತೆರೆಯಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಜಿಲ್ಲೆಯಲ್ಲಿ 19358 ರೈತರಿಗೆ 45 ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆಯಾಗಿದ್ದು, ಈ ಪೈಕಿ ಬ್ಯಾಂಕಿನಿಂದ 8873 ರೈತರಿಗೆ 19.17 ಕೋಟಿ ರೂ. ವಿಮೆ ಪರಿಹಾರವನ್ನು ನೇರವಾಗಿ ಖಾತೆದಾರರ ಉಳಿತಾಯ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದರು.

ಹಾಲು ಉತ್ಪಾದಕರಿಗೆ ತಮ್ಮ ಬ್ಯಾಂಕ್ ವಿಶೇಷ ಯೋಜನೆಯೊಂದನ್ನು ಆರಂಭಿಸಿದ್ದು, ಜೀರೋ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆಯಲು ಅವಕಾಶ ನೀಡಿದೆ. ಆ ಮೂಲಕ ಹಾಲು ಉತ್ಪಾದಕ ಸದಸ್ಯರಿಗೆ ಬ್ಯಾಂಕಿನಿಂದ ಎಟಿಎಂ, ರೂಪೇ ಕಾರ್ಡ್‌ಗಳನ್ನು ನೀಡಿ ಹಣಕಾಸಿನ ನೆರವು ಪಡೆಯುವ ಅವಕಾಶ ಕಲ್ಪಿಸಲಾಗುವುದು ಎಂದರು.

ನಬಾರ್ಡ್ ರೈತರ ಪರವಾಗಿ ಇರುವ ಉದ್ದೇಶದಿಂದ ಸ್ಥಾಪಿತವಾಗಿದ್ದು, ಈಗ ಆ ಉದ್ದೇಶವನ್ನೇ ಮರೆತಿದೆ ಎಂದು ಆರೋಪಿಸಿದ ಅವರು, ಸಹಕಾರಿ ಸಂಘಗಳ ಮೇಲೆ ನಬಾರ್ಡ್ ವ್ಯವಸ್ಥಿತ ಗದಪ್ರಹಾರ ಮಾಡುತ್ತಿದೆ ಎಂದು ಆಪಾಧಿಸಿದರು.

2024-25ನೇ ಸಾಲಿನಲ್ಲಿ 1600 ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಹಣಕಾಸಿನ ವರ್ಷಾಂತ್ಯಕ್ಕೆ 25 ಕೋಟಿ ರೂ. ನಿವ್ವಳ ಲಾಭಗಳಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ಮಹಾಲಿಂಗಶಾಸ್ತ್ರಿ, ಸುಧೀರ್, ದುಗ್ಗಪ್ಪಗೌಡ, ಹನುಮಂತ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *