
ಶಿವಮೊಗ್ಗ :- ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ರಾಜ್ಯ ಸರ್ಕಾರಿ ನೌಕರರ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರ ಆಶ್ರಯದಲ್ಲಿ ಡಿ. 15ರಂದು ಸಂಜೆ 5.30ಕ್ಕೆ ಅಲ್ಲಮ್ ಪ್ರಭು ಬಯಲು (ಫ್ರೀಡಂಪಾರ್ಕ್) ನಲ್ಲಿ ಆಳ್ವಾಸ್ ಸಾಂಸ್ಕತಿಕ ವೈಭವ-2025ನ್ನು ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಳ್ವಾಸ್ ಸಾಂಸ್ಕತಿಕ ವೈಭವ ಎನ್ನುವುದು ನಮ್ಮ ದೇಶದ ಸಾಂಸ್ಕತಿಕ ಸೊಗಡನ್ನು ಅನಾವರಣಗೊಳಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ಕಲೆ, ಸಂಗೀತ, ನೃತ್ಯ, ಯಕ್ಷಗಾನ ಸಂಸ್ಕತಿಯನ್ನು ಬಿಂಬಿಸಲಾಗುವುದು. ಸುಮಾರು 300 ವಿದ್ಯಾರ್ಥಿ ಕಲಾವಿದರುಗಳು ಮೂರು ಗಂಟೆಗಳ ಕಾಲ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದೆ. ನಗರದ ನಾಗರೀಕರು, ಸಂಘ-ಸಂಸ್ಥೆಗಳ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು, ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದರು.
ಆಳ್ವಾಸ್ ಸಾಂಸ್ಕತಿಕ ವೈಭವದ ಕಾರ್ಯಕ್ರಮದಲ್ಲಿ ಯೋಗದೀಪಿಕಾ, ಶಾಸ್ತ್ರೀಯ ನೃತ್ಯ, ಬಡಗುತಿಟ್ಟು ಯಕ್ಷಗಾನ-ಶ್ರೀರಾಮಕ ಪಟ್ಟಾಭಿಷೇಕ, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಕಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ-ವರ್ಷಧಾರೆ, ಪುರುಲಿಯಾ ತೆಂಕುತಿಟ್ಟು ಯಕ್ಷಗಾನ-ಅಗ್ರಪೂಜೆ, ಬೊಂಬೆ ವಿನೋದಾವಳಿ ಆಯೋಜಿಸಲಾಗಿದೆ.
ಸಾಂಸ್ಕತಿಕ ವೈಭವ ಕಾರ್ಯಕ್ರಮದ ಅಧ್ಯಕ್ಷ ಎಸ್.ಪಿ. ದಿನೇಶ್ ಮಾತನಾಡಿ, ಪ್ರವೇಶ ಉಚಿತವಾಗಿದೆ. ಆದರೆ ಕೆಲವು ಪಾಸ್ಗಳನ್ನು ನೀಡಲಾಗಿದೆ. ಕಾರಣ ಸುಮಾರು 15 ಸಾವಿರ ಆಸನಗಳನ್ನು ನಾವು ಮಾಡಿದ್ದೇವೆ. ಸರಿಯಾದ ಸಮಯಕ್ಕೆ ಬಂದರೆ ಕುಳಿತುಕೊಳ್ಳಲು ಅವಕಾಶವಿರುತ್ತದೆ. ಕಾರ್ಯಕ್ರಮ ಸರಿಯಾಗಿ 5.30ಕ್ಕೆ ಆರಂಭವಾಗುತ್ತದೆ. ಸಭಾ ಕಾರ್ಯಕ್ರಮ ಅರ್ಧಗಂಟೆ ಅಷ್ಟೇ ಇದ್ದು 6 ಗಂಟೆಯಿಂದ 9 ಗಂಟೆಯವರೆಗೆ ನಿರಂತರವಾಗಿ ಆಳ್ವಾಸ್ ಸಾಂಸ್ಕತಿಕ ವೈಭವ ನಡೆಯಲಿದೆ. ಸಾರ್ವಜನಿಕರು 10 ನಿಮಿಷ ಮುಂಚಿತವಾಗಿಯೇ ಬಂದು ಆಸೀನರಾಗಬೇಕು. ಕುಡಿಯುವ ನೀರು, ಮತ್ತು ತಿಂಡಿ-ತಿನಿಸುಗಳನ್ನು ತಾವೇ ತರಬೇಕು ಮತ್ತು ಇದಕ್ಕೆ ಅನುಕೂಲವಾಗುವಂತೆ ಕಾರ್ಯಕ್ರಮ ನಡೆಯುವ ಸುತ್ತ ತಿಂಡಿ-ತಿನಿಸುಗಳ ಸ್ಟಾಲ್ಗಳನ್ನು ಕೂಡ ತೆರೆಯಲಾಗುವುದು, ಈ ಕಾರ್ಯಕ್ರಮಕ್ಕೆ ಸುಮಾರು 25ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಕೈಜೋಡಿಸಿವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಎನ್. ಮಂಜುನಾಥ್, ಆರ್. ಮೋಹನ್ಕುಮಾರ್, ಬಳ್ಳೇಕೆರೆ ಸಂತೋಷ್, ಗೋಪಿನಾಥ್, ಅನಿತಾ ರವಿಶಂಕರ್, ಸಮನ್ವಯ ಕಾಶೀ, ಶಾಂತಾಸುರೇಂದ್ರ, ಪಾಪಣ್ಣ ಇದ್ದರು.