ಶಿವಮೊಗ್ಗ :- ವಾಲ್ಮಿಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆತ್ಮ ಹತ್ಯೆಗೆ ಶರಣಾದ ಚಂದ್ರಶೇಖರ ಕುಟುಂಬದ ಓರ್ವರಿಗೆ ಸರ್ಕಾರ ಕೆಲಸ ಕೊಡುವುದು ಮತ್ತು ಪಿಂಚಣಿ ನೀಡುವುದು ಬಾಕಿ ಇತ್ತು. ಅದಕ್ಕಾಗಿ ರಾಷ್ಟ್ರಭಕ್ತರ ಬಳಗದಿಂದ ಅನೇಕ ಹೋರಾಟಗಳನ್ನು ಮಾಡಿ ಸರ್ಕಾರಕ್ಕೆ ಗಡುವು ನೀಡಿದ ಪರಿಣಾಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂಧಿಸಿದೆ ಎಂದು ರಾಷ್ಟ್ರ ಭಕ್ತ ಬಳಗದ ಪ್ರಮುಖರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಅವರು ಇಂದು ಚಂದ್ರಶೇಖರ್ ಮನೆಯಲ್ಲಿ ಅವರ ಪತ್ನಿ ಕವಿತಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ವಿಧಾನ ಮಂಡಲದ ಅಧಿವೇಶನದಲ್ಲಿ ಮೃತರ ಕುಟುಂಬಕ್ಕೆ 25ಲಕ್ಷ ರೂ.ಪರಿಹಾರ ನೀಡುವುದಾಗಿ ಭರವಸೆ ನೀಡಿದಂತೆ ಸ್ಪಂದಿಸಿ ನಾಳೆ ಬೆಂಗಳೂರಿನಲ್ಲಿ ಪರಿಹಾರ ಚೆಕ್ ವಿತರಣೆ ಮಾಡಲಿದ್ದಾರೆ. ಈ ಬಗ್ಗೆ ನಿಗಮದ ಎಂಡಿ ದೂರವಾಣಿ ಮೂಲಕ ನನಗೆ ತಿಳಿಸಿದ್ದಾರೆ. ಅಟ್ರಾಸಿಟಿ ಕೇಸಿನ 8.25ಲಕ್ಷ ರೂ.ಜಿಲ್ಲಾಧಿಕಾರಿ ಮೂಲಕ ಮೃತರ ಕುಟುಂಬದ ಖಾತೆಗೆ ಇಷ್ಟರಲ್ಲೇ ಜಮಾ ಮಾಡಲಾಗುವುದು ಎಂದು ಡಿಸಿ ತಿಳಿಸಿದ್ದು, ಕುಟುಂಬಕ್ಕೆ ಓರ್ವರಿಗೆ ಸರ್ಕಾರಿ ಕೆಲಸ ಹಾಗೂ ಚಂದ್ರಶೇಖರ್ ಅವರ ಪಿಎಫ್ ಹಣ ಹಾಗೂ ಪಿಂಚಣಿ ಬಗ್ಗೆ ಕೂಡ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಅದನ್ನೂ ಕೂಡ ನೀಡುವ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಕುಟುಂಬದ ಸದಸ್ಯರು ಹಾಗೂ ರಾಷ್ಟ್ರಭಕ್ತರ ಬಳಗದ ಪ್ರಮುಖರು ಇದ್ದರು.