
ಶಿಕಾರಿಪುರ :- ಯಡಿಯೂರಪ್ಪನವರ ರೈತ ಪರವಾದ ಚಿಂತನೆ ಕಾಳಜಿಯ ಫಲವಾಗಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ತುಂಗಾ ನದಿಯಿಂದ ಅಂಜನಾಪುರ ಜಲಾಶಯಕ್ಕೆ ನೀರು ತರುವ ಏತ ನೀರಾವರಿ ಯೋಜನೆ ಜರಿಯಾಗಿದ್ದು, ರೈತರ ಸಹಿತ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಜಲಾಶಯದ ನೀರು ಒದಗಿಸುವ ಯೋಜನೆ ಜರಿಗೊಳಿಸಿದ ಯಡಿ ಯೂರಪ್ಪನವರ ಜೊತೆಗೆ ಶ್ರಮಿಸಿದ ಸಂಸದ ರಾಘವೇಂದ್ರರಿಗೆ ಅಭಿನಂದಿಸುವುದಾಗಿ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ಇಂದು ತಾಲೂಕಿನ ರೈತರ ಜೀವ ನಾಡಿ, ಸಹಸ್ರಾರು ಭೂಪ್ರದೇಶಕ್ಕೆ ನೀರುಣಿಸುವ ಬೃಹತ್ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದ ಭರ್ತಿಯಾದ ಹಿನ್ನಲೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಪತ್ನಿ ಪ್ರೇಮ ಜತೆಗೂಡಿ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ನಂತರ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಭಗವಂತನ ಕೃಪೆಯಿಂದ ಈ ಬಾರಿ ರಾಜದ್ಯಂತ ಉತ್ತಮ ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದ ಅವರು ಮುಂದಿನ ದಿನದಲ್ಲಿ ರೈತರ ಬೆಳೆಗೆ ವೈಜನಿಕ ಬೆಲೆ ದೊರೆತು ರೈತರ ಕುಟುಂಬ ನೆಮ್ಮದಿ ಮೂಲಕ ಸುಖವಾಗಿರಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ರೈತರಿಗೆ 15-20 ದಿನಗಳ ಕಾಲ ನೀರಿನ ಅಗತ್ಯವಿಲ್ಲ ಈ ಸಂದರ್ಭದಲ್ಲಿ ಅಧಿಕಾರಿಗಳು ಕಾಲುವೆಯನ್ನು ದುರಸ್ತಿ,ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹಾಯಲು ಎಲ್ಲ ರೀತಿಯ ಸಿದ್ದತೆಗೆ ತುರ್ತು ಕ್ರಮ ಕೈಗೊಳ್ಳಬೇಕು.ರೈತರು ನೆಮ್ಮದಿ ಸ್ವಾಭಿಮಾನದಿಂದ ಬದುಕಲು ಅಗತ್ಯ ಗಮನ ಹರಿಸುವಂತೆ ಸೂಚಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ,ತಾಲೂಕಿನ ಎಲ್ಲ ಹೋಬಳಿಗೆ ಏತ ನೀರಾವರಿ ಯೋಜನೆ ಜರಿಗೊಳಿಸಿ ರೈತರಿಗೆ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹರಿ ಸಿದ ಸಂತೃಪ್ತಿಯನ್ನು ಹೊಂದಿದ್ದು, ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಾಗಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೋಡಿ ಎತ್ತರ ಹೆಚ್ಚಿಸಿದ್ದು ಪ್ರಮುಖ ಕಾರಣವಾಗಿದೆ ಎಂದರು.
ಪ್ರಧಾನಿ ನರೇಂದ್ರ ರೈತ ಪರ ಯೋಜನೆ ನೀಡಿದ್ದಾರೆ.ಶರಾವತಿ ಸಂತ್ರಸ್ಥರಿಗೆ ಸಿಗಂದೂರು ಸಮೀಪ ಸೇತುವೆ ನಿರ್ಮಾಣವಾಗಿದ್ದು,ಜುಲೈ 14ರ ಸೋಮವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಲೋಕಾರ್ಪಣೆಗೊಳ್ಳುವ ಸಾದ್ಯತೆ ಹೆಚ್ಚಿದೆ ಎಂದರು.
ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ತೇಜಸ್ವಿನಿ ರಾಘವೇಂದ್ರ, ಪುರಸಭೆ ಅಧ್ಯಕ್ಷೆ ಸುನಂದಾ,ಉಪಾಧ್ಯಕ್ಷೆ ರೂಪಾ, ಮುಖಂಡ ಕೊಳಗಿ ರೇವಣಪ್ಪ, ಸಂಕ್ಲಾಪುರ ಹನುಮಂತಪ್ಪ, ಹುಲ್ಮಾರ್ ಮಹೇಶ್, ಚನ್ನವೀರಪ್ಪ, ವಸಂತಗೌಡ, ದೂದಿಹಳ್ಳಿ ಬಸವರಾಜ್, ಶಶಿಧರ್ ಬಿ.ಡಿ. ಭೂಕಾಂತ್ ಇನ್ನಿತರರಿದ್ದರು.
