google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಭಾರತ ಮಾತೆಯ ಸಿಂಧೂರವನ್ನು ಮುಟ್ಟಲು ಬಂದರೆ ಪಾಕಿಸ್ತಾನ ಭೂಪಟದಿಂದಲೇ ಮಾಯವಾಗಲಿದೆ ಎಂಬ ಸಂದೇಶವನ್ನು ನಮ್ಮ ಭಾರತೀಯ ಸೇನೆ ಈಗಾಗಲೇ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಅವರು ಇಂದು ಶಿವಮೊಗ್ಗ ನಾಗರೀಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ತಿರಂಗಾಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ತಿರಂಗಾಯಾತ್ರೆ ಹುತಾತ್ಮ ಸೈನಿಕರಿಗೆ ಮತ್ತು ವಿಜಯ ತಂದುಕೊಟ್ಟ ವೀರ ಸೈನಿಕರಿಗೆ ಮತ್ತು 26 ಪ್ರವಾಸಿಗರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ವಿಶ್ವಾಸ ತುಂಬಲು ಈ ವಿಜಯ ಸಂಕಲ್ಪಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

ಸುರಿಯುತ್ತಿರುವ ಭಾರೀ ಮಳೆಯನ್ನು ಲೆಕ್ಕಿಸದೆ ಸಹಸ್ರಾರು ಯುವಕ-ಯುವತಿಯರು ಮತ್ತು ನಾಗರೀಕರು ತಿರಂಗಾ ಧ್ವಜವನ್ನು ಹಿಡಿದು, ಭಾರತ ಮಾತೆಗೆ ಜೈಕಾರ ಹಾಕುತ್ತಾ, ವೀರ ಯೋಧರಿಗಾಗಿ ಹೆಜ್ಜೆಯನ್ನು ಇಟ್ಟಿದ್ದೇವೆ. ನಮ್ಮ ತಾಯಂದಿರು ಸಿಂಧೂರಕ್ಕಾಗಿ ಮತ್ತು ನಮ್ಮ ದೇಶದ ಮುಂದಿನ ಭವಿಷ್ಯಕ್ಕಾಗಿ ಚಳಿ, ಮಳೆ. ಗಾಳಿ, ಬಿಸಿಲು ಲೆಕ್ಕಿಸದೆ ಗಡಿ ಕಾಯುತ್ತಿರುವ ಸೈನಿಕರಿಗೆ ಧೈರ್ಯ ತುಂಬಲು ದೇಶಾದ್ಯಂತ ಈ ಯಾತ್ರೆ ಹಮ್ಮಿಕೊಂಡಿದ್ದು, ದೇಶದ ಜನರಲ್ಲಿ ಇಮ್ಮಡಿ ಉತ್ಸಾಹ ತುಂಬಿ ದೇಶಸೇವೆ ಬಗ್ಗೆ ಅರಿವು ಮೂಡಿಸಿದಂತಾಗಿದೆ ಎಂದರು.

ಮೋದಿ ಹೆಡ್‌ಲೈನ್ ಮಾತ್ರ ಎಂದವರಿಗೆ ಡೆಡ್‌ಲೈನ್ ಗೊತ್ತಿದೆ ಎಂದು ತೋರಿಸಿದ್ದಾರೆ. ನಮ್ಮ ದೇಶದ ನೀರು ಕುಡಿದು, ವಿಷ ಕಕ್ಕುವ ಎಲ್ಲಾ ದೇಶದ್ರೋಹಿಗಳಿಗೆ ಮತ್ತು ಒಳಗಿನ ಉಗ್ರಗಾಮಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತೆ ಶೋಭಾ ಭಾರತದ ಒಳಗಿರುವ ಉಗ್ರಗಾಮಿಗಳನ್ನು ಹೇಗೆ ಓಡಿಸಬೇಕು ಎಂಬುದನ್ನು ನಾವು ನಿಶ್ಚಯ ಮಾಡುವ ಕಾಲ ಬಂದಿದೆ. ನಮ್ಮ ಯುದ್ದ ಕೇವಲ ಆಕ್ರಮಣಕಾರಿಗಳ ಮಾತ್ರವಲ್ಲ, ದೇಶದ ಒಳಗಿನ ದೇಶದ್ರೋಹಿಗಳು ಹಾಗೂ ಉಗ್ರಗಾಮಿಗಳನ್ನು ದಮನ ಮಾಡಲು ಕೂಡ ಆಗಿದೆ. ಮಹಿಳೆಯರು ನಾವು ದೇಶಕ್ಕಾಗಿ ನಾರಿ ಸೈನ್ಯ ಎಂದು ಯೋಚಿಸಿ ನಮ್ಮ ಮಕ್ಕಳಿಗೆ ದೇಶಭಕ್ತಿಯನ್ನು ಮೂಡಿಸಿ, ಅವರಲ್ಲಿ ದೇಶಭಕ್ತಿಯ ಬೀಜವನ್ನು ಬಿತ್ತುವ ಕಾಲ ಇದಾಗಿದೆ ಎಂದರು.

ಪ್ರೊ. ಪುನಿತ್‌ಕುಮಾರ್ ಮಾತನಾಡಿ, ಹಿಂದೆ ನಮ್ಮ ದೇಶದಲ್ಲಿ ಸಿಂಹಸೈನ್ಯ ಇದ್ದರೂ ಕೂಡ ನಾಯಕತ್ವ ಸಿಂಹದ್ದು ಆಗಿರಲಿಲ್ಲ. ಈಗ ಸಿಂಹಸೈನ್ಯಕ್ಕೆ ಸಿಂಹದ ನಾಯಕತ್ವವೇ ಸಿಕ್ಕಿದೆ. ಹಲವಾರು ಭಯೋತ್ಪಾದಕ ದಾಳಿಗೆ ಬಡ್ಡಿ ಸಮೇತ ತಕ್ಕ ಉತ್ತರ ನೀಡಲಾಗಿದೆ.

ಈ ಸಂದರ್ಭದಲ್ಲಿ ದಕ್ಷಿಣಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಪೂರ್ಣ ಭಂಡಾರ್ಕರ್ ಇದ್ದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಎಸ್. ದತ್ತಾತ್ರಿ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ವಿರುಪಾಕ್ಷಪ್ಪ, ಸುರೇಖಾ ಮುರಳೀಧರ್, ಸುನೀತಾ ಅಣ್ಣಪ್ಪ, ಸುವರ್ಣಾ ಶಂಕರ್, ಮಾಲ್ತೇಶ್, ಬಳ್ಳೇಕೆರೆ ಸಂತೋಷ್, ಶಾಂತಾ ಸುರೇಂದ್ರ, ರಶ್ಮಿ ಶ್ರೀನಿವಾಸ್, ರಮೇಶ್ ಹಾಗೂ ನಿವೃತ್ತ ಯೋಧರು, ನಿವೃತ್ತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮಳೆಯನ್ನು ಲೆಕ್ಕಿಸದೆ ನಿಂತಿದ್ದರು.

Leave a Reply

Your email address will not be published. Required fields are marked *