
ಶಿವಮೊಗ್ಗ :- ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರನ್ನಾಗಿ ಸಿನಿಮಾ ಪತ್ರಕರ್ತ ದೇಶಾದ್ರಿ ಹೊಸ್ಮನೆ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಕನ್ನಡ ಚಲನಚಿತ್ರ ರಂಗದ ಅಭಿವೃದ್ದಿಗಾಗಿಯೇ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ವರ್ಷ ಅಂತರ ರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವಗಳನ್ನು ಆಯೋಜಿಸುವ ಮೂಲಕ ಚಿತ್ರರಂದ ಪ್ರಗತಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದೆ. ಈಗ ಅಕಾಡೆಮಿಗೆ ಹಿರಿಯ ಸಂಗೀತ ನಿರ್ದೇಶಕ ಹಾಗೂ ನಟ ಸಾಧು ಕೋಕಿಲ ಅವರು ಅಧ್ಯಕ್ಷರಾಗಿದ್ದು, ಅವರೊಂದಿಗೆ ಅಕಾಡೆಮಿ ಸದಸ್ಯರನ್ನಾಗಿ ಶಿವಮೊಗ್ಗದ ಪತ್ರಕರ್ತ ದೇಶಾದ್ರಿ ಹೊಸ್ಮನೆ ಸೇರಿದಂತೆ ಸಿನಿಮಾ ಪತ್ರಿಕೋದ್ಯಮದಲ್ಲಿ ೭ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಿನಿಮಾ ಪತ್ರಕರ್ತರಾಗಿ ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿರುವ ದೇಶಾದ್ರಿ ಹೊಸ್ಮನೆ ಅವರು, ಸದ್ಯಕ್ಕೀಗ ಶಿವಮೊಗ್ಗದ ನಮ್ಮನಾಡು ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಅವರ ಸಿನಿಮಾ ಪತ್ರಿಕೋದ್ಯಮದಲ್ಲಿನ ಸೇವೆಗೆ ಈಗ ಅಕಾಡೆಮಿ ಸದಸ್ಯತ್ವದ ಗೌರವ ಸಿಕ್ಕಿದೆ.ಈ ಹಿಂದೆ 2018ರಲ್ಲಿ ಅವರುಮಾದ್ಯಮ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದರು.
