ಶಿವಮೊಗ್ಗ :- ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಪ್ರಸೂತಿ ವಿಭಾಗದಲ್ಲಿ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿ ತಾಯಿ ಹಾಗೂ ಮಗುವಿನ ಪ್ರಾಣವನ್ನು ಉಳಿಸಿದ ಕೀರ್ತಿ ಮತ್ತು ಹೆಮ್ಮೆ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ರಾಘವೇಂದ್ರ ಭಟ್ ಅವರಿಗೆ ಸಲ್ಲುತ್ತದೆ.
ಈ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯ ಯಶೋಗಾಥೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದ ಡಾ.ರಾಘವೇಂದ್ರ ಭಟ್. ಸುಮಾರು ೩೭ ವರ್ಷದ ೭ ತಿಂಗಳು ತುಂಬಿದ ಗರ್ಭೀಣಿಯೊಬ್ಬರು ಅತ್ಯಂತ ಸಂದಿಗ್ಧ ಸಮಸ್ಯೆಯೊಂದಿಗೆ ನಮ್ಮ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಪರೀಕ್ಷೆ ಮಾಡಿದಾಗ ಅವರಿಗೆ ಗರ್ಭಾವಸ್ಥೆಯಲ್ಲಿ ಗರ್ಭ ಚೀಲದ ಒಳಗೆ ಇರಬೇಕಾದ ಪ್ಲಾಸೆಂಟಾ ಗರ್ಭಕೋಶವನ್ನು ಛೇಧಿಸಿಕೊಂಡು ಹೊರಗೆ ಹೋಗಿದ್ದರಿಂದ ತಾಯಿಯ ಜೀವಕ್ಕೆ ಅಪಾಯ ಖಚಿತವಾಗಿತ್ತು. ಇದು ಎಂತಹ ಗಂಭೀರ ಸಮಸ್ಯೆಯೆಂದರೆ ಮುಂದುವರಿದ ಅಮೇರಿಕಾದಂತಹ ದೇಶದಲ್ಲಿಯೂ ಕೂಡ ಇಂತಹ ಸಮಸ್ಯೆಯಿರುವ ಶೇ.೭ರಷ್ಟು ಗರ್ಭೀಣಿ ಮಹಿಳೆಯರು ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿಯೂ ಕೂಡ ಶೇ.೧೫ರಷ್ಟು ಮಹಿಳೆಯರು ಪ್ರಾಣ ಬಿಟ್ಟಿದ್ದಾರೆ.
ಇಂತಹ ಬಹುದೊಡ್ಡ ಸಮಸ್ಯೆಯನ್ನು ಆಸ್ಪತ್ರೆಯ ನಮ್ಮ ವೈದ್ಯರ ಮತ್ತು ಸಿಬ್ಬಂದಿಗಳ ತಂಡ ಎದುರಿಸಲು ಸಿದ್ಧವಾಗಿತ್ತು. ನುರಿತ ವೈದ್ಯರ ತಂಡವು ಅತ್ಯಾಧುನಿಕ ಯಂತ್ರೋಪಕರಣಗಳ ಸಹಾಯದಿಂದ ಅತಿ ಕ್ಲಿಷ್ಟಕರವಾದ ಜೀವಕ್ಕೆ ಅಪಾಯ ತಂದೊಡ್ಡಿದ್ದ, ಈ ಶಸ್ತ್ರಚಿಕಿತ್ಸೆಯನ್ನು ಹಗಲು ರಾತ್ರಿ ಶ್ರಮಿಸಿ ಯಶಸ್ವಿಯಾಗಿ ಪೂರೈಸಿದೆವು. ಇಂತಹ ಶಸ್ತ್ರ ಚಿಕಿತ್ಸೆಯನ್ನು ಮಾಡುವಾಗ ನಮ್ಮ ತಂಡದಲ್ಲಿ ಪ್ರಸೂತಿ ತಜ್ಞರು, ಮೂತ್ರಕೂಶ ತಜ್ಞರು, ಅರವಳಿಕೆ ತಜ್ಞರು ಸೇರಿದಂತೆ ಹಲವರು ಇದ್ದರು ಎಂದರು.
ಮುಖ್ಯವಾಗಿ ಈ ಶಸ್ತ್ರ ಚಿಕಿತ್ಸೆಯನ್ನು ಮಾಡುವಾಗ ರಕ್ತ ಹೆಚ್ಚಾಗಿ ಹೊರಗೆ ಬರುತ್ತಿತ್ತು. ಇದನ್ನು ತಡೆಗಟ್ಟುವುದೇ ವೈದ್ಯರಿಗೆ ಒಂದು ದೊಡ್ಡ ಸವಾಲಾಗಿತ್ತು. ಸುಮಾರು ೮೦ಬಾಟಲಿ ರಕ್ತವನ್ನು ನಾವು ಈ ಶಸ್ತ್ರಚಿಕಿತ್ಸೆಗೆ ಬಳಸಿದ್ದೇವೆ. ರೇಡಿಯಾಲಾಜಿಸ್ಟ್ ಸಹಾಯದಿಂದ ಗರ್ಭಕೋಶಕ್ಕೆ ರಕ್ತಪೂರೈಸುವ ಎರಡು ಮುಖ್ಯ ಧಮನಿಗಳನ್ನು ಬ್ಲಾಕ್ ಮಾಡಿ ಕೂಡಲೇ ಮಗುವನ್ನು ಹೊರ ತೆಗೆದು ಗರ್ಭೀಣಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಗರ್ಭಕೋಶದ ಸಮೇತ ತೆಗೆಯಲಾಯಿತು. ನಂತರ ಬ್ಲಾಕ್ ಮಾಡಿದ ಧಮನಿಗಳನ್ನು ಕಟ್ಟಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಲಾಯಿತು.
ಬಹುಶಃ ಇಂತಹ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಮಾಡುವಾಗ ವೈದ್ಯರಾದ ನಾವು ಕೂಡ ದೇವರ ಮೊರೆಯನ್ನು ಹೋದೆವು. ಮನುಷ್ಯನ ಭಾವನೆಗಳ ಮೀಟಿ ಈ ಆಪರೇಷನ್ ಮಾಡಲಾಯಿತು. ಇದೊಂದು ಅಪರೂಪದಲ್ಲಿ ಅಪರೂಪದ ಕೇಸಾಗಿತ್ತು. ಅಲ್ಲದೇ ವಿಶ್ವದರ್ಜೆಯ ಶಸ್ತ್ರ ಚಿಕಿತ್ಸೆ ಕೂಡ ಇದಾಗಿದೆ. ಇಂತಹ ಆಪರೇಷನ್ ಮಾಡುವ ತೀವ್ರ ನಿಗಾಘಟಕ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಉಪಕರಣಗಳು ಮತ್ತು ನುರಿತ ತಜ್ಞರು ಇರುವುದರಿಂದ ಸಾಧ್ಯವಾಗಿದೆ.
ಕೊಲ್ಲಾಪುರದಲ್ಲಿ ನಡೆದ ರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲಿ ಈ ಆಪರೇಷನ್ ಕುರಿತು ಸಂಶೋಧ ಪ್ರಬಂಧ ಮತ್ತು ವೀಡಿಯೋ ಪ್ರದರ್ಶನ ಮಾಡಿದಾಗ ಅಲ್ಲಿನ ವೈದ್ಯರೇ ಬೆರಗಾದರು. ಅಷ್ಟೇ ಅಲ್ಲ ಅಲ್ಲಿ ಹಾಜರಿದ್ದ ಅಮೇರಿಕಾದ ವೈದ್ಯರು ಕೂಡ ಈ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ. ಇದು ನಮಗೆ ಅತ್ಯಂತ ಸಂಭ್ರಮ ತಂದಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಶೈಲೇಶ್ ಎಸ್.ಎನ್. ಇನ್ನಿತರರಿದ್ದರು.
