
ಶಿವಮೊಗ್ಗ :- ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ಮತ್ತು ಧಾರ್ಮಿಕ ಮುಖಂಡನ ಬಂಧನ ವಿರೋಧಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಇಂದು ಪ್ರತಿಭಟನಾ ಮೆರವಣಿಗೆ ಮತ್ತು ಪ್ರತಿಭಟನ ಸಭೆಯನ್ನು ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರಾ ಪ್ಯಾರಡೈಸ್ ಮುಂಭಾಗದಲ್ಲಿ ಆಯೋಜಿಸಿದ್ದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಬಸವ ಕೇಂದ್ರದ ಶ್ರೀಮರುಳ ಸಿದ್ದ ಸ್ವಾಮೀಜಿಗಳು ಬಾಂಗ್ಲಾ, ನೇಪಾಳ, ಪಾಕಿಸ್ಥಾನ, ಶ್ರೀಲಂಕಾ, ಅಫ್ಘಾನಿಸ್ತಾನ ಕ್ಕೂ ಜನ್ಮದಾತೆ ಭಾರತ ಮಾತೆ. ಆದರೂ ಆ ಮಕ್ಕಳಿಗೆ ಇನ್ನೂ ಬುದ್ದಿ ಬಂದಿಲ್ಲ. ಧಾರ್ಮಿಕ ಮೂಲಭೂತವಾದವನ್ನು ಮುಂದಿಟ್ಟುಕೊಂಡು ದೇಶ ಕಟ್ಟಲು ಮುಂದಾದ ಪಾಕಿಸ್ಥಾನ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ವಸುದೈವಕ ಕುಟುಂಬ ಎನ್ನುವುದು ಭಾರತೀಯರ ನಂಬಿಕೆಯಾಗಿದೆ. ಆದರೆ ಇದನ್ನು ಒಡೆಯಲು ಯತ್ನಿಸಲಾಗುತ್ತಿದೆ.
ಬಹುತ್ವದಲ್ಲಿ ಏಕತೆಯನ್ನು ಕಾಪಾಡುತ್ತಿರುವುದು ಭಾರತದಲ್ಲಿ ಮಾತ್ರ. ಸಣ್ಣಸಣ್ಣ ದೇಶಗಳು ಭಾರತದಮೇಲೆ ಸಡ್ಡು ಹೊಡೆಯುತ್ತಿವೆ. ಬಾಂಗ್ಲಾದಲ್ಲಿ ತ್ವರಿತವಾಗಿ ಶಾಂತಿ ನೆಲೆಸುವಂತಾಗಲಿ ಎಂದು ಆಶಿಸಿದರು.
ಕೂಡ್ಲಿ ಮಠದ ಅಭಿನವ ಶಂಕರ ಸ್ವಾಮೀಜಿ ಮಾತನಾಡಿ, ಬಾಂಗ್ಲಾ ಸಂವಿಧಾನದ ಕಲಂ 41 ಎಲ್ಲಾ ಧರ್ಮ ದವರನ್ನು ಸಮಾನವಾಗಿ ಕಾಣಬೇಕೆಂದು ಹೇಳುತ್ತದೆ. ಆದರೂ ಸಂವಿಧಾನ ವಿರೊಧಿ ಚಳವಳಿ ನಡೆಸಲಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರಕಾರ ಗಲಬೆಯನ್ನು ನೋಡಿಕೊಂಡು ಸುಮ್ಮನೆ ಇದ್ದಂತಿದೆ. ಮತೀಯ ಶಕ್ತಿಗಳು ಮಾತ್ರ ಗಲಬೆ ನಡೆಸುತ್ತಿವೆ ಎಂದಿಲ್ಲ. ಸರ್ಕಾರ ಕೂಡ ಇದರಲ್ಲಿ ಭಾಗಿಯಾದಂತಿದೆ.
ಇದೇ ರೀತಿ ಆದೇಶ ನಡೆದುಕೊಂಡರೆ ಇಲ್ಲಿಗೆ ಬಂದಿರುವ ಬಾಂಗ್ಲಾದವರನ್ನು, ನುಸುಳುಕೋರರನ್ನು ವಾಪಸ್ ಕಳಿಸಬೇಕಾಗುತ್ತದೆ. ಅಲ್ಲಿರುವ ಹಿಂದುಗಳ ರಕ್ಷಣೆಯಾಗಬೇಕು. ಇಲ್ಲ ಬಾಂಗ್ಲಾವೇ ಈ ದೇಶದ ಭಾಗವಾಗಬೇಕಿದೆ. ಅನ್ನ ಹಾಕಿದವರ ಮನೆಗೆ ಕನ್ನ ಹಾಕುವವರು ಮುಸಲ್ಮಾನರು. ಬಾಂಗ್ಲ ವಿಮೋಚನೆ ಸಂದರ್ಭದಲ್ಲಿ ಅನ್ನ ಕೊಟ್ಟವರೇ ಹಿಂದು ಸಾಧು ಸಂತರು. ಚಿನ್ಮಯ ದಾಸರ ಪರವಾಗಿ ವಕಾಲತ್ತು ಹಾಕಿದ ವಕೀಲರಿಗೆ ಹೊಡೆದು ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜೇಶ್ ಗೌಡ ಮಾತನಾಡಿ, ಬಂಗ್ಲಾದ ಮತಾಂಧ ಮುಸಲ್ಮಾನರು ಮಕ್ಕಳು,ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನು ವಿರೋಧಿಸಿದ ಸಂನ್ಯಾಸಿ ಅವರಿಗೆ ಭಯೋತ್ಪಾದಕನಂತೆ ಕಾಣುತ್ತಾರೆ. ಬಂಧಿಸಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಚಿನ್ಮಯ ದಾಸರ ಹಿಂದೆ ಇಡೀ ಹಿಂದೂ ಸಮುದಾಯವಿದೆ. ಅಲ್ಲಿರುವ ಹಿಂದುಗಳನ್ನು ದೇಶ ಬಿಟ್ಟು ಹೋಗಿ ಎನ್ನುತ್ತಿದ್ದಾರೆ. ಅದು ಮೂಲತಃ ದುರ್ಗೆಯ ನಾಡು. ಹಿಂದುಗಳ ನಾಡು. ಚಿನ್ಮಯ ದಾಸರನ್ನು ಬಿಡುಗಡೆ ಮಾಡಲು ಆಗ್ರಹಿಸಿದರು.
ಮಧುಕರ್ ಮಾತನಾಡಿ, ಈ ಪ್ರತಿಭಟನೆ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧವಲ್ಲ.ಯಾವುದೇ ಸಮುದಾಯದ ವಿರುದ್ಧವೂ ಅಲ್ಲ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯದ ವಿರುದ್ಧ. ಭಾರತದಲ್ಲಿ ಹಿಂದುಗಳ ಜಗೃತಿಗಾಗಿ ಎಂದರು.
ಪ್ರತಿಭಟನೆಯಲ್ಲಿ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ವಾಸುದೇವ್, ಆರ್ಎಸ್ಎಸ್ ಮುಖಂಡ ಪಟ್ಟಾಭಿರಾಮ್, ದೇವರಾಜ್ ಅರಳಿ ಹಳ್ಳಿ, ಪ್ರವೀಣ್, ಬಿ.ಎ.ರಂಗನಾಥ್, ಮೋಹನ್ಗೌಡ ಮೊದಲಾದವರು ಇದ್ದರು.