ಶಿವಮೊಗ್ಗ :- ನಗರದ ಕುವೆಂಪು ರಸ್ತೆಯಲ್ಲಿರುವ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮಗಳನ್ನು ಸೆ. 27 ರಿಂದ ಸೆ. 29ರವರೆಗೆ ಫ್ರೀಡಂ ಪಾರ್ಕ್ (ಅಲ್ಲಮ ಪ್ರಭು ಮೈದಾನ) ನಲ್ಲಿ ಆಯೋಜಿಸಲಾಗಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೨೪ರಲ್ಲಿ ಸಮಾಜ ಹಿರಿಯರು ಸಂಘವನ್ನು ಹುಟ್ಟು ಹಾಕಿದರು. ಸಂಘ ಆರಂಭವಾದ ವರ್ಷದಲ್ಲಿ 59 ಸದಸ್ಯರಿದ್ದರು. ಇಂದು 3ಸಾವಿರ ಕ್ಕಿಂತ ಅಧಿಕ ಷೇರುದಾರರನ್ನು ಹೊಂದಿದೆ. ಸಂಘವು ಈಗಾಗಲೇ ರಜತ ಮಹೋತ್ಸವ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವ ಹಾಗೂ ಅಮೃತ ಮಹೋತ್ಸವನ್ನು ಯಶಸ್ವಿಯಾಗಿ ಆಚರಿಸಿ, ಇದೀಗ ಶತಮಾನೋತ್ಸವದ ಆಚರಣೆಗೆ ಸಜ್ಜುಗೊಂಡಿದೆ ಎಂದರು.
ಆರ್ಯವೈಶ್ಯ ಸಹಕಾರ ಸಂಘಗಳು ಹಾಗೂ ನಗರದ ವಿವಿಧ ಸಹಕಾರ ಸಂಘಗಳ ರಾಜ್ಯಮಟ್ಟದ ಸಮಾವೇಶ, ಸಂಸ್ಥಾಪಕರದ ಸ್ಮರಣೆ, ಭವ್ಯ ಜಥಾ, ಹಿರಿಯ ಸಹಕಾರಿಗಳಿಗೆ ಸನ್ಮಾನ, ಸಾಂಸ್ಕತಿಕ ವೈವಿಧ್ಯ, ವಿಜಯ್ ಪ್ರಕಾಶ್ರವರಿಂದ ಸಂಗೀತ ಸಂಜೆ ವಿಶೇಷವಾಗಿ ಶೆಟ್ಟರ ಸಂತೆ ಹಾಗೂ ಪ್ರಸಿದ್ಧ ಗಾಯಕ ಕಾರ್ಯಕ್ರಮಗಳನ್ನು ಈ ಶತಮಾನೋತ್ಸವದ ಭಾಗವಾಗಿ ಆಯೋಜಿಸಲಾಗಿದೆ ಎಂದರು.
ಸೆ. 28ರಂದು ಬೆಳಿಗ್ಗೆ 9ಗಂಟೆಗೆ ಅಲ್ಲಮ ಪ್ರಭು ಮೈದಾನದಲ್ಲಿ ಆರಂಭಗೊಳ್ಳಲಿರುವ ಈ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯವನ್ನು ಬೆಂಗಳೂರು ವಾಸವಿ ವಿದ್ಯಾ ಪೀಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ವಹಿಸುವರು. ಶತಮಾನೋತ್ಸವವನ್ನು ಮೈಸೂರು ರಾಜವಂಶಸ್ಥರು, ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ರವರು ಉದ್ಘಾಟಿಸಲಿದ್ದಾರೆ. ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಉಪಸ್ಥಿತರಿರುವರು ಎಂದರು.
ಅಂದು ಬೆಳಿಗ್ಗೆ 11ಗಂಟೆಗೆ ನಡೆಯುವ ರಾಜ್ಯ ಆರ್ಯವೈಶ್ಯ ಸಹಕಾರ ಸಂಘಗಳು ಪತ್ತಿನ ಸಹಕಾರ ಹಾಗೂ ಶಿವಮೊಗ್ಗ ನಗರದ ಸಂಘಗಳ ರಾಜ್ಯ ಸಮಾವೇಶವನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಲಿದ್ದಾರೆ. ರಾಜ್ಯ ಆರ್ಯವೈಶ್ಯ ಕೋ-ಆಪ್ ಬ್ಯಾಂಕ್ ಅಂಡ್ ಸೊಸೈಟೀಸ್ ಫೆಡರೇಷನ್ನ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ ಉಪಸ್ಥಿತರಿರಲಿದ್ದಾರೆ. ಸಂಜೆ 5.30ಕ್ಕೆ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಷೇರುದಾರರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಹಿಂದಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಗೌರವ ಸಮರ್ಪಿಸಲಾಗುವುದು ಎಂದರು.
ಶತಮಾನೋತ್ಸವದ ಅಂಗವಾಗಿ ಸೆ. 29ರ ಬೆಳಿಗ್ಗೆ ೮ಗಂಟೆಗೆ ಕುವೆಂಪು ರಸ್ತೆಯ ವಾಸವಿ ವೃತ್ತದಿಂದ ಅಲ್ಲಮ ಪ್ರಭು ಮೈದಾನ (ಫ್ರೀಡಂ ಪಾರ್ಕ್) ವರೆಗೆ ಭವ್ಯ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಗೆ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್ ಚಾಲನೆ ನೀಡಲಿದ್ದಾರೆ. 10.30ಕ್ಕೆ ಸಂಘದ ಸಂಸ್ಥಾಪಕ ಕುಟುಂಬ ವರ್ಗದವರಿಗೆ ನೀಡಲಾಗುವ ಗೌರವಾರ್ಪಣೆ- ಸಂಸ್ಥಾಪಕರ ಸ್ಮರಣೆ ವೇದಿಕೆ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಉದ್ಘಾಟಿಸಲಿದ್ದು, ಸಂಸದರು, ಸಚಿವರು, ಶಾಸಕರು ಹಾಗೂ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಶೆಟ್ಟರ ಸಂತೆ: ಶತಮಾನೋತ್ಸವದ ಭಾಗವಾಗಿ ಸೆ. 27,28 ಮತ್ತು 29ರಂದು ಅಲ್ಲಮ ಪ್ರಭು ಮೈದಾನ ಆವರಣದಲ್ಲಿ ಶೆಟ್ಟರ ಸಂತೆ ಶೀರ್ಷಿಕೆ ಅಡಿಯಲ್ಲಿ ನೂರಕ್ಕೂ ಹೆಚ್ಚು ಸ್ಟಾಲ್ಗಳನ್ನು ತೆರೆಯಲಾಗಿದ್ದು, ವೈವಿಧ್ಯಮಯ ತಿನಿಸುಗಳು, ಅಲಂಕಾರಿಕ ಸಾಮಗ್ರಿಗಳು, ಗೃಹೋಪಯೋಗಿ ವಸ್ತುಗಳು, ಚಿತ್ತಾಕರ್ಷಕ ವಸ್ತ್ರ ವೈವಿಧ್ಯಗಳು. ಎಲ್ಲವೂ ಕೂಡಾ ಒಂದೇ ಸೂರಿನಡಿಯಲ್ಲಿ ಲಭ್ಯವಾಗಲಿವೆ ಎಂದು ಸಂಘದ ಅಧ್ಯಕ್ಷ ಡಿ.ಎಂ. ಅರವಿಂದ್ ತಿಳಿಸಿದರು.
29ರ ಭಾನುವಾರ ಸಂಜೆ 5.30ಕ್ಕೆ ನಾಡಿನ ಹೆಸರಾಂತ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದವರಿಂದ ಸಂಗೀತ ಸಂಜೆ ನಡೆಯಲಿದ್ದು ಸಾರ್ವಜನಿಕರು ಸಹ ಈ ಮೂರು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ನಟರಾಜ್ ಕೆ.ಜಿ., ವಿ.ಚೇತನ್, ನಾಗಭೂಷಣ್, ಸಚ್ಚಿನ್, ಗೀತಾ, ಜಿ.ವಿ. ಶ್ರೀಧರಮೂರ್ತಿ, ಹೆಚ್.ಎಸ್.ಮಂಜುನಾಥ್, ಬೆಳಗೂರು ಮಂಜುನಾಥ್, ಸುಪ್ರೀಯಾ ಚೇತನ್, ಎಸ್.ಎನ್. ಶ್ರೀನಾಗ್, ವಿಕ್ರಮ್, ಗಿರೀಶ್, ಸುರೇಶ್ ಸೇರಿದಂತೆ ಹಲವರಿದ್ದರು.