google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಯನ್ನು ತಿರುಚಿ, ಜನರಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಸಮಾಜದಲ್ಲಿ ಅಶಾಂತಿ ಮೂಡಿಸಿ, ಶಾಂತಿಭಂಗ ಮಾಡಲು ಹೊರಟವರ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿ ಶ್ರೀಕ್ಷೇತ್ರ ಸಿಗಂಧೂರು ಚೌಡೇಶ್ವರಿದೇವಿ ಭಕ್ತ ಮಂಡಳಿ ಮತ್ತು ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಜು. 21 ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿರುವಾಗ, ಮಾಧ್ಯಮ ಪ್ರತಿನಿಧಿಗಳು ಸಿಗಂಧೂರು ಸೇತುವೆ ವಿಷಯವಾಗಿ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವಾಗ, ಸಿಗಂದೂರು ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆ ಎಂದು ಮಾದ್ಯಮದವರ ಮುಂದೆ ನೀಡಿದ ಹೇಳಿಕೆಯನ್ನು ಬಿಜೆಪಿಯ ಸೋಶಿಯಲ್ ಮೀಡಿಯಾ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಅರ್ಧಕ್ಕೆ ಕತ್ತರಿಸಿ, ಸಿಗಂದೂರು ದೇವಸ್ಥಾನವನ್ನು ಹೇಗೆ ಹಾಳು ಮಾಡಬೇಕೆಂದು ಒಂದು ತಿಂಗಳೊಳಗೆ ನಿಮಗೆ ಡಿಟೈಲ್ ಹೇಳುವೆ ಎಂಬ ೧೯ ಸೆಕೆಂಡ್ ವಿಡಿಯೋವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ ವಿಡಿಯೋ ಕೆಳಗಡೆ ಅಜನಿ ವಿದ್ಯಾಮಂತ್ರಿಗಳೇ ಸಿಗಂದೂರು ಚೌಡೇಶ್ವರಿ ಮಾತೆಯ ಮಂದಿರ ಹಾಳು ಮಾಡ್ತೀವಿ ಎಂದ ನಾಲಿಗೆಗೆ ತಾಯಿ ಬರೆ ಹಾಕುವುದು ನಿಶ್ಚಿತ ಎಂದು ದೇವರ ಚಿತ್ರದೊಂದಿಗೆ ಬರೆದ ವಿಡಿಯೋ ವೈರಲ್ ಮಾಡಿದ್ದು, ಈ ರೀತಿ ಹೇಳಿಕೆಯನ್ನು ತಿರುಚಿರುವುರೊಂದಿಗೆ ಜನರಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಮಂತ್ರಿಗಳ ಬಗ್ಗೆ ದ್ವೇಷ ಭಾವನೆ ಮೂಡುವಂತೆ ಪ್ರಚೋದಿಸಿ ಜನರನ್ನು ಉದ್ರೇಕಗೊಳಿಸಿ ಸಮಾಜದಲ್ಲಿ ಅಶಾಂತಿ ಮೂಡಿಸಿ ಸಂಘರ್ಷ ಏರ್ಪಡಿಸುವ ಉದ್ದೇಶ ಹೊಂದಿರುವ ಬಿಜೆಪಿ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ವೈರಲ್ ಮಾಡಿದ್ದು, ಮಂತ್ರಿಗಳನ್ನು ಗೌರವಿಸುತ್ತಿದ್ದ ಸಮಾಜದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದಾರೆ ಎಂದು ಜನ ತಪ್ಪು ಭಾವನೆ ಮೂಡುವಂತೆ ಸಾರ್ವಜನಿಕರನ್ನು ಉದ್ರಿಕಿಸುವಂತೆ ಪ್ರಚೋದಿಸುತ್ತಿದ್ದಾರೆ ಎಂದು ದೂರಿದರು.

ಈ ಹಿಂದಿನ ಸರ್ಕಾರವು ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸಲು ಹುನ್ನಾರ ನಡೆಸಿದ್ದನ್ನು ಹಾಗೂ ಆಡಳಿತ ಮಂಡಳಿಗೆ ನೀಡಿದ್ದ ಕಿರುಕುಳ, ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿಪಡಿಸಿರುವುದನ್ನು ಖಂಡಿಸಿ ಸಿಗಂದೂರು ಕ್ಷೇತ್ರ ಹೋರಾಟ ಸಮಿತಿ ರಚಿಸಿ ಮಧು ಬಂಗಾಪ್ಪನವರು ಹಿಂದಿನ ಸರ್ಕಾರಕ್ಕೆ ಎಚ್ಚರಿಕೆಯನ್ನು, ನೀಡಿ ಸಿಗಂಧೂರು ದೇವಸ್ಥಾನ ಬಹುಸಂಖ್ಯಾತ ಈಡಿಗ ಸಮಾಜದ ಅಸ್ಮಿತೆ, ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ಸರ್ಕಾರ ಮುಜರಾಯಿಗೆ ಸೇರಿಸುವ ಹುನ್ನಾರ ಕೈಬಿಡದಿದ್ದರೆ ಜೇನು ಗೂಡಿಗೆ ಕೈ ಹಾಕಿದಂತೆ ಎಂದು ಎಚ್ಚರಿಸಿ ಹೋರಾಟದ ಎಚ್ಚರಿಕೆಯನ್ನು ನೀಡಿದ್ದರು. ಅಂದಿನಿಂದ ಪ್ರತಿಹಂತದಲ್ಲೂ ಶ್ರೀಕ್ಷೇತ್ರದ ವಿಷಯವಾಗಿ ಇಲ್ಲಸಲ್ಲದ ಸುಳ್ಳುಸುದ್ದಿ ಹರಡುವ ಕುತಂತ್ರ ರಾಜಕಾರಣ ಮಾಡುತ್ತಿದ್ದು, ಈ ನಕಲಿ ವೀಡಿಯೊ ಸೃಷ್ಠಿ ಇದರ ಭಾಗವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ರೀತಿಯ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿ ಶಾಂತಿಭಂಗವಾಗುವ ಸಾಧ್ಯತೆಗಳಿರುವುದರಿಂದ, ಮಧುಬಂಗಾರಪ್ಪನವರ ಹೇಳಿಕೆಯನ್ನು ತಿರುಚಿರುವವರ ಮೇಲೆ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಜಿ.ಡಿ. ಮಂಜುನಾಥ್, ವಿನೋದ್ ಕೆ., ಮಂಜು ಪುರಲೆ, ಕೆ.ಸಿ. ನಾಗರಾಜ್, ಲೋಕೇಶ್, ಉಮೇಶ್, ಎನ್.ಪಿ. ಧರ್ಮರಾಜ್, ರಾಮಪ್ಪ, ರಾಜಶೇಖರ್, ಉಮೇಶ್ ಕೆ.ಸಿ., ಹೆಚ್. ಕಲ್ಲನ, ಕೆ.ವೈ. ರಾಮಚಂದ್ರಪ್ಪ, ಎಂ.ಬಿ. ರಾಜು, ಪರಮೇಶ್ವರಪ್ಪ, ಎ.ಎಂ. ರಮೇಶ್ ಇದ್ದರು.

Leave a Reply

Your email address will not be published. Required fields are marked *