
ಶಿವಮೊಗ್ಗ :- ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳಿಗೆ ತಾಲೀಮು ಆರಂಭವಾಗಿದೆ. ಸಕ್ರೆಬೈಲು ಬಿಡಾರದಲ್ಲಿಯೇ ಸಾಗರ್, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ತಾಲೀಮಿನಲ್ಲಿ ತೊಡಗಿಸಿಕೊಂಡಿದ್ದಾವೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟಗಾರ್, ಕಳೆದ ೧೫ ದಿನದಿಂದ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಮಹಾನಗರ ಪಾಲಿಕೆಯವರು ಆನೆಗಳನ್ನು ಶಿವಮೊಗ್ಗಕ್ಕೆ ಕೊಂಡೊಯ್ದ ಬಳಿಕ ನಗರದಲ್ಲಿ ತಾಲೀಮು ನಡೆಸಲಾಗುತ್ತದೆ. ಇಂದು ಅಥವಾ ನಾಳೆ ಆನೆಗಳು ಶಿವಮೊಗ್ಗಕ್ಕೆ ತೆರಳುವ ಸಾಧ್ಯತೆ ಇದೆ ಎಂದರು.


ಅಂಬಾರಿಯ ಭಾರಕ್ಕೆ ತಕ್ಕಷ್ಟು ಭಾರವನ್ನೇ ಆನೆಯ ಮೇಲೆ ಹೊರಿಸಿ ತಾಲೀಮು ನಡೆಸಲಾಗುತ್ತದೆ. ಸದ್ಯ ಈ ಆನೆಗಳಿಗೆ ಕ್ಯಾಂಪ್ನಲ್ಲಿ ನಿತ್ಯ ನೀಡುವ ಆಹಾರವನ್ನೇ ನೀಡಲಾಗುತ್ತಿದೆ. ಬಳಿಕ ಎಂದಿನಂತೆ ಕಾಡಿಗೆ ಬಿಡಲಾಗುತ್ತದೆ. ಶಿವಮೊಗ್ಗಕ್ಕೆ ತೆರಳಿದ ನಂತರ ಪಾಲಿಕೆ ವತಿಯಿಂದ ಆಹಾರ ಪೂರೈಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಕ್ರೆಬೈಲು ಕ್ಯಾಂಪ್ನಲ್ಲಿ ನಾಲ್ಕು ಹೆಣ್ಣಾನೆಗಳಿವೆ. ಈ ಪೈಕಿ ಮೂರು ಹೆಣ್ಣಾನೆಗಳು ಮರಿ ಹಾಕಿವೆ. ಮತ್ತೊಂದು ಆನೆ ಗರ್ಭ ಧರಿಸಿದೆ. ಹಾಗಾಗಿ ಈ ಬಾರಿ ಮೆರವಣಿಗೆಗೆ ಹೆಣ್ಣಾನೆಗಳು ಲಭ್ಯವಿರುವುದಿಲ್ಲ ಎಂದು ತಿಳಿಸಿದರು.

