ಶಿವಮೊಗ್ಗ :- ಸಮಾಜವನ್ನು ಸ್ವಚ್ಚಗೊಳಿಸುವ ಕಾಯಕ ಮಾಡುತ್ತಿರುವ ಪೌರಕಾರ್ಮಿಕರನ್ನು ನಾರಾಯಣ ಸ್ವರೂಪಿ ಎನ್ನಬಹುದು. ಪೌರ ಕಾರ್ಮಿಕರ ಯೋಗಕ್ಷೇಮ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಮಹಾನಗರಪಾಲಿಕೆ, ಶಿವಮೊಗ್ಗ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ನೌಕರರ ಸಂಘದ ವತಿಯಿಂದ ಸೋಮವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆ -೨೦೨೪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ಸುಂದರವಾಗಿ, ಚೆನ್ನಾಗಿರಬೇಕೆಂದರೆ ಸ್ವಚ್ಚತೆ ಇರಬೇಕು. ಇಂತಹ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರು ನಾರಾಯಣಿ ಸ್ವರೂಪಿಯಾಗಿದ್ದು ಇವರ ಕಾರ್ಯ ಪವಿತ್ರವಾದದ್ದು ಮತ್ತು ಮೆಚ್ಚುವಂತದ್ದು. ಪೌರ ಕಾರ್ಮಿಕರ ಬಗ್ಗೆ ಪಾಲಿಕೆ ಯಾವಾಗಲೂ ಕಾಳಜಿ ಹೊಂದಿದೆ. ಮಹಾತ್ಮಾ ಗಾಂಧೀಜಿಯವರು ಕಾರ್ಮಿಕರಲ್ಲಿ ಹರಿಯನ್ನು ಕಾಣುತ್ತಿದ್ದೇನೆ ಎಂದಿದ್ದರು.
ಪೌರ ಕಾರ್ಮಿಕರಿಲ್ಲದಿದ್ದರೆ ಸಮಾಜದ ಆರೋಗ್ಯ ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಸ್ವಾಸ್ಥ್ಯ ಕಾಯುವ ಪೌರ ಕಾರ್ಮಿಕರ ಕುಟುಂಬಗಳು ಚೆನ್ನಾಗಿರಬೇಕು. ಆರೋಗ್ಯದಿಂದ ಕೂಡಿರಬೇಕು. ಇತ್ತೀಚೆಗೆ ಅನೇಕ ಕಾರ್ಮಿಕರ ಮಕ್ಕಳು ವಿದ್ಯಾವಂತರಾಗಿ ಉತ್ತಮ ಹುದ್ದೆಗಳನ್ನು ಮಾಡತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವಿದ್ಯಾವಂತರಾಗಬೇಕು. ಒಂದು ಹಂತದಲ್ಲಿ ಪೌರ ಕಾರ್ಮಿಕರು ಸಮಾಜದ ಉಳ್ಳವರ ಮನಸ್ಸನ್ನು ಸಹ ಬದಲಾಯಿಸುವ ಕೆಲಸ ಮಾಡಿದ್ದಾರೆ. ಬರ, ನೆರೆ ಪರಿಸ್ಥಿತಿಯಲ್ಲಿ ತಮ್ಮ ಕಲ್ಯಾಣ ನಿಧಿಯ ಹಣ ನೀಡಿದ್ದಾರೆ. ಕೊರೊನಾ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಅವರು ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ , ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಗರದ ಸ್ವಚ್ಚತೆ ಹಾಗೂ ನಮ್ಮೆಲ್ಲರ ಆರೋಗ್ಯ ಕಾಪಾಡುವ ಕೆಲಸವನ್ನು ಸ್ವಾಭಿಮಾನದಿಂದ ಅವರು ಮಾಡುತ್ತಿದ್ದಾರೆ. ಇಂತಹ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ನಾವು ಶಾಸಕರು ಪ್ರಯತ್ನಿಸುತ್ತೇವೆ. ತಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುತ್ತೇವೆ. ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು.
ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಮಾತನಾಡಿ, ಸಮಾಜದ ರೋಗವನ್ನು ತಡೆಯುವ ಮತ್ತು ಖಾಯಿಲೆ ಬಾರದಂತೆ ಮಾಡುವ ಶಕ್ತಿ ಪೌರ ಕಾರ್ಮಿಕರಿಗಿದೆ. ಇಂತಹ ಪೌರ ಕಾರ್ಮಿಕರಿಗೆ ಒಳ್ಳೆಯ ಆರೋಗ್ಯ, ಆಯುಷ್ಯವನ್ನು ಭಗವಂತ ನೀಡಲಿ. ಅವರು ಹೃದಯ ಶ್ರೀಮಂತಿಕೆಯಿಂದ ಸ್ವಚ್ಚತಾ ಕಾರ್ಯ ಮಾಡುತ್ತಿದ್ದು ನಿಮ್ಮ ಜೀವನವೂ ನೆಮ್ಮದಿಯಿಂದ ಕೂಡಿರಬೇಕು ಎಂದರು.
ಪಾಲಿಕೆ ಆಯುಕ್ತ ಕವಿತಾ ಯೋಗಪ್ಪನವರ್ ಮಾತನಾಡಿ, ಸಾರ್ವಜನಿಕರು ಕಸ ವಿಂಗಡಣೆ ಮಾಡಿ ಕೊಡಬೇಕು. ಈಗ ನಮ್ಮ ಪೌರ ಕಾರ್ಮಿಕರೇ ವಿಂಗಡಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲ ಜಾಗವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು, ಪೌರ ಕಾರ್ಮಿಕರು ಬಂದಾಗ ಅವರಿಗೆ ಸಹಕರಿಸಬೇಕು. ಪೌರ ಕಾರ್ಮಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ ಪರಿಕರಗಳನ್ನು ಬಳಸಿಕೊಂಡು ಕೆಲಸ ಮಾಡಬೇಕು.
ಪಾಲಿಕೆ ಉಪಾಯುಕ್ತ ಲಿಂಗೇಗೌಡ, ಕರಿಭೀಮಣ್ಣನವರ್, ಇತರೆ ಅಧಿಕಾರಿಗಳು, ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.