ಶಿವಮೊಗ್ಗ :- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಅಭಿವೃದ್ಧಿ ಮೆಚ್ಚಿ ಈಗಾಗಲೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೈ ಜೋಡಿಸಿದ್ದು ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಅವರು ಇಂದು ಕುಂಸಿಯಲ್ಲಿ ಬಿಜೆಪಿ ರೈತ ಮೋರ್ಚಾ ಕರ್ನಾಟಕ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ರೈತರ ಉತ್ಪಾದಕರ ಸಂಸ್ಥೆಗಳ ಪ್ರಮುಖರು ಮತ್ತು ಪ್ರಗತಿಪರ ರೈತರ ಸಭೆ ಉದ್ಘಾಟಿಸಿ ಮಾತನಾಡಿದರು.
ರೈತರ ಬೆಳೆಗೆ ವೈಜನಿಕ ಬೆಲೆ ನೀಡಬೇಕು. ರೈತರ ಬಾಳು ಹಸನಾಗಬೇಕು ಎಂಬುದು ಪ್ರಧಾನಿಯವರ ಇಚ್ಛೆಯಾಗಿದೆ. ಭಾರತದ ಮೂಲ ಬೆನ್ನೆಲುಬು ರೈತನಾಗಿದ್ದಾನೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ದೇಶದಲ್ಲೇ ಪ್ರಥಮ ರೈತ ಬಜೆಟ್ ಮಂಡಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದರು. ಕಿಸಾನ್ ಸಮ್ಮಾನ್ ಯೋಜನೆಗೆ ಕೇಂದ್ರದ ೬ ಸಾವಿರ ಮತ್ತು ರಾಜ್ಯದ ೪ ಸಾವಿರ ರೂ. ಹಣ ನೀಡಿದ್ದರು. ಕಾಂಗ್ರೆಸ್ ಈಗ ಅದನ್ನು ರದ್ದುಗೊಳಿಸಿದೆ ಎಂದು ದೂರಿದರು.
ರೈತರ ಪಂಪ್ ಸೆಟ್ ಗಳಿಗೆ ಕೇವಲ ೨೫ ಸಾವಿರ ರೂ.ಗಳಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಅದು ಈಗ ಎರಡೂವರೆ ಲಕ್ಷ ರೂ. ಆಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜರಿಗೆ ತರಲಾಗಿತ್ತು. ಅದನ್ನೂ ಕೂಡ ನಿಲ್ಲಿಸಲಾಗಿದೆ. ಕೇಂದ್ರ ಸರ್ಕಾರ ರೈತರಿಗೆ ಬೇಕಾದ ಗೊಬ್ಬರವನ್ನು ಅತ್ಯಂತ ಕಡಿಮೆ ಸಬ್ಸಿಡಿ ದರದಲ್ಲಿ ನೀಡಿದೆ. ರೈತರಿಗೆ ಬೆಳೆಗೆ ತಕ್ಕ ಬೆಲೆ ನೀಡುವುದು ಕೂಡ ಪ್ರಧಾನಿಯವರ ಆಶಯವಾಗಿದೆ. ಆದರೆ, ರೈತ ಪರ ಎಲ್ಲಾ ಅಭಿವೃದ್ಧಿಗಳಿಗೆ ಕಾಂಗ್ರೆಸ್ ಕಲ್ಲು ಹಾಕುತ್ತಿದೆ ಎಂದರು.
ಬಿ.ವೈ. ರಾಘವೇಂದ್ರ ೪ನೇ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ. ಅಭಿವೃದ್ಧಿ ಎಂದರೆ ಯಡಿಯೂರಪ್ಪ ಎಂಬ ಮಾತು ಇತ್ತು. ರಾಘವೇಂದ್ರ ಅವರನ್ನೂ ಮೀರಿಸಿ ಅಭಿವೃದ್ಧಿ ಮಾಡಿದ್ದಾರೆ. ಕ್ಷೇತ್ರದ ಜನತೆಗೆ ಅದರ ಅರಿವಿದೆ. ಈ ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಸಂಸದರಾಗಿ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಗೆಲ್ಲುತ್ತಾರೆ. ರಾಜ್ಯದಲ್ಲಿ ಇದುವರೆಗೆ ಕಾಣದ ಉತ್ತಮ ವಾತಾವರಣ ಇದೆ.
ತುತ್ತು ಅನ್ನ ಕೊಡುವ ರೈತರಿಗೆ ಬರಗಾಲದಲ್ಲಿ ಮತ್ತು ನೆರೆ ಬಂದಾಗ ಯಡಿಯೂರಪ್ಪ ಸರ್ಕಾರವಿದ್ದಾಗ ಕೇಂದ್ರದ ಪರಿಹಾರಕ್ಕೆ ಕಾಯದೇ ಹೆಕ್ಟೇರ್ ಗೆ ೧೪ ಸಾವಿರ ರೂ.ಗಳನ್ನು ನೀಡಿದ್ದರು. ನೆರೆ ಬಂದಾಗ ೨೪ ಸಾವಿರ ರೂ. ನೀಡಿದ್ದರು. ಎನ್.ಡಿ.ಆರ್.ಎಫ್, ಮಾರ್ಗಸೂಚಿ ಪ್ರಕಾರ ೧ ಲಕ್ಷ ಪರಿಹಾರ ಇದ್ದರೆ ಆ ಸಂದರ್ಭದಲ್ಲಿ ೪ ಲಕ್ಷ ರೂ. ನೀಡಿದ್ದರು. ಅದನ್ನು ರೈತರು ಮರೆತಿಲ್ಲ ಎಂದರು.
ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ, ಕೇಂದ್ರ ರೈತ ಮೋರ್ಚಾದ ಮುಖಡರಾದ ಜಯಸೂರ್ಯ, ಶಂಭುಕುಮಾರ್, ಆನಂದ್, ಡಾ. ನವೀನ್ ಇದ್ದರು.