ಶಿವಮೊಗ್ಗ: ಕುಟುಂಬ ರಾಜಕಾರಣವನ್ನು ವಿರೋಧಿಸಲು ಪ್ರಜಾಪ್ರಭುತ್ವಕ್ಕೆ ಗೌರವ ಕೊಡಲು ನಾನು ಪಕ್ಷೇತರನಾಗಿ ಸ್ಪರ್ಧಿಸಿರುವೆ ಎಂದು ಪಕ್ಷೇತರ ಅಭ್ಯರ್ಥಿ ಹಾಗೂ ಐಡಿಯಾ ಒಕ್ಕೂಟ ರಾಷ್ಟ್ರೀಯ ಸಂಚಾಲಕ ಶಿವರುದ್ರಯ್ಯಸ್ವಾಮಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನ್ನ ಮೊದಲ ಆದ್ಯತೆ ಸಂವಿಧಾನ ರಕ್ಷಣೆಗಾಗಿ, ಮತ್ತು ಬಿಜೆಪಿಯ ಒಳ ಮೀಸಲಾತಿ ಕುತಂತ್ರದ ರಾಜಕಾರಣದ ಮೂಲಕ ಸಾಮಾಜಿಕ ಕ್ಷೋಭೆ ಹುಟ್ಟು ಹಾಕಿ ದುರ್ಬಲ ಸಮಾಜಗಳ ವಿಭಜನೆಯ ಯೋಜನೆಯ ವಿರುದ್ಧವಾಗಿದೆ. ಬಿಜೆಪಿ ಎಂದರೆ ಭ್ರಷ್ಟಾಚಾರದ ಪ್ರತಿರೂಪವೇ ಆಗಿಬಿಟ್ಟಿದೆ. ಇದರ ವಿರುದ್ಧ ನಾನು ಧ್ವನಿ ಎತ್ತಲು ಈ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.
ನನ್ನ ಗುರುತು ಕಂಪ್ಯೂಟರ್ ಆಗಿದೆ. ಈಗ ಆ ಚಿಹ್ನೆಯಿಂದಲೇ ನನ್ನನ್ನು ಗುರುತಿಸುತ್ತಿದ್ದಾರೆ. ವಾಟ್ಸಾಪ್ ಮೂಲಕ ಈಗಾಗಲೇ ಸುಮಾರು 4 ಲಕ್ಷ ಮತದಾರರ ಸಂಪರ್ಕದಲ್ಲಿದ್ದೇನೆ. ಚುನಾವಣಾ ವೆಚ್ಚದಲ್ಲಿ ನಿಯಂತ್ರಣ ಇಟ್ಟುಕೊಂಡಿದ್ದೇನೆ. ಕಾರ್ಯಕರ್ತರ ಹೆಸರಲ್ಲಿ ಮತದಾರರ ನಡುವೆ ಮಧ್ಯವರ್ತಿಯಾಗಿರುವ ವ್ಯಕ್ತಿಗಳ ನಿವಾರಣೆಯೇ ಮುಖ್ಯವಾಗುತ್ತದೆ. ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಸುಮಾರು 16 ವರ್ಷಗಳ ಕಾಲ ಈ ಜಿಲ್ಲೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಶಿವಮೊಗ್ಗದಲ್ಲಿ ಯಾರ್ಯಾರ ಆಸ್ತಿಗಳು ಎಷ್ಟಿವೆ ಎಂಬ ವಿಷಯವೂ ನನಗೆ ಗೊತ್ತಿದೆ. ನಾನು ಅಧಿಕಾರಿಯಾಗಿದ್ದಾಗ ಸುಮಾರು 4 ರಾಜಕೀಯ ಕುಟುಂಬಗಳ ಆಸ್ತಿಯ ವಿವರವನ್ನು ತಿಳಿದುಕೊಂಡಿದ್ದೇನೆ. ಅದನ್ನೆಲ್ಲಾ ಬಯಲಿಗೆಳೆಯಲು ನನಗೊಂದು ಶಕ್ತಿ ಕೊಡಬೇಕು. ಅವರ ಆಸ್ತಿಯನ್ನು ಬಹಿರಂಗಪಡಿಸಲು ನನ್ನ ಗೆಲ್ಲಿಸಬೇಕು ಎಂದರು.
ನಾನು ಎಲ್ಲೇ ಹೋದರೂ ಮನೆಗೊಂದು ಮತ ಕೊಡುತ್ತೇವೆ ಎಂದು ತಿಳಿಸುತ್ತಿದ್ದಾರೆ. ಕುಟುಂಬ ರಾಜಕಾರಣವನ್ನು ವಿರೋಧಿಸುವ ಈಶ್ವರಪ್ಪನವರೂ ಕೂಡ ಕುಟುಂಬ ರಾಜಕಾರಣಿಗಳೇ. ಬಿಜೆಪಿಯ ಮಾಜಿ ಮಂತ್ರಿ ಜಾತಿ ಸಂಘಗಳಿಗೆ ಕಮಿಟಿ ಹೆಸರಲ್ಲಿ ಲಕ್ಷಾಂತರ ರೂ ಖರ್ಚು ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸಮಾಜದಳದ ಕೊಲ್ಲೂರು ಮಂಜುನಾಥ್ ನಾಯ್ಕ್, ಭಾರತೀಯ ಜನತಾದಳದ ಶಿವರಾಮ್ ಕೆ.ವಿ., ಜನ ಪರಿವರ್ತನದ ತಿಪ್ಪೇಶಪ್ಪ ಇದ್ದರು.