ಶಿವಮೊಗ್ಗ: ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಸಾರಥ್ಯದಲ್ಲಿ ನಗರದ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನ. 8 ಮತ್ತು 9 ರಂದು ರೋಟರಿ ದತ್ತಿನಿಧಿ ಮತ್ತು ಪೊಲಿಯೋ ಪ್ಲಸ್ ಕುರಿತ ಸಮೃದ್ಧಿ 2025 ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಅಧ್ಯಕ್ಷ ಚಂದ್ರಹಾಸ್ ಪಿ ರಾಯ್ಕರ್ ಹೇಳಿದರು.
ರೋಟರಿ ಜಿಲ್ಲೆ 3182ರ ವ್ಯಾಪ್ತಿಯ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಒಳಗೊಂಡು ಸಮೃದ್ಧಿ 2025 ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ನಾಲ್ಕು ಜಿಲ್ಲೆಗಳಿಂದ 700ಕ್ಕೂ ಹೆಚ್ಚು ಸದಸ್ಯರು ಪಾಲ್ಗೊಳ್ಳುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನವೆಂಬರ್ 8ರಂದು ಸಂಜೆ 5.30ಕ್ಕೆ ನಿಯೋಜಿತ ಜಿಲ್ಲಾ ಗವರ್ನರ್ ರವಿಶಂಕರ್ ದಾಕೋಜು ಕಾರ್ಯಾಗಾರ ಉದ್ಘಾಟಿಸುವರು. ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅಧ್ಯಕ್ಷತೆ ವಹಿಸುವರು. ಮಾಜಿ ಜಿಲ್ಲಾ ಗವರ್ನರ್ ಸಾಂಬಶಿವ ರಾವ್ ಪತಿಬಂದ್ಲ, ರಾಜಾರಾಮ್ ಭಟ್ ಬಿ, ಡಿ.ಎಸ್.ರವಿ, ಬಿ.ಎನ್.ರಮೇಶ್, ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣಗೌಡ ಬಿ, ವಲಯ 10ರ ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ನವೆಂಬರ್ 9ರಂದು ಬೆಳಗ್ಗೆ 9.30ರಿಂದ ಐದು ವಿಷಯಗಳ ಉಪನ್ಯಾಸ ಹಮ್ಮಿಕೊಂಡಿದ್ದು, ವಿನಯ್ ಕುಮಾರ್ ಪೈ, ಕೆ.ಕೃಷ್ಣ ಶೆಟ್ಟಿ, ಕಾಶಿನಾಥ್ ಪ್ರಭು, ಡಾ. ಆರ್.ಎಸ್.ನಾಗಾರ್ಜುನ ಮತ್ತು ಡಾ. ಪಿ.ನಾರಾಯಣ ಅವರು ವಿಶೇಷ ಉಪನ್ಯಾಸ ನೀಡುವರು. ನವೆಂಬರ್ 9ರಂದು ಮಧ್ಯಾಹ್ನ 1ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಆಹ್ವಾನಿತ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ರೋಟರಿ ದತ್ತಿನಿಧಿ ಮೂಲಕ ವಿಶ್ವಾದ್ಯಂತ ಆರೋಗ್ಯ, ಶಿಕ್ಷಣ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಪೊಲಿಯೋ ನಿರ್ಮೂಲನೆಗೆ 1.3 ಬಿಲಿಯನ್ ಡಾಲರ್ ವಿನಿಯೋಗಿಸಲಾಗಿದೆ ಎಂದು ಹೇಳಿದರು.
ರೋಟರಿ ಜಿಲ್ಲೆ 3182ರ ಮೂಲಕ 2013ರಿಂದ ಈವರೆಗೂ ಆಸ್ಪತ್ರೆ ಉಪಕರಣ, ರಕ್ತನಿಧಿ ಕೇಂದ್ರ, ಡಯಾಲಿಸಿಸ್ ಸೆಂಟರ್, ಸ್ಕೂಲ್ ಸಪೋರ್ಟ್ ಯೋಜನೆ, ಮಹಿಳಾ ಸಬಲೀಕರಣ ಯೋಜನೆ, ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ, ಲ್ಯಾಬ್, ಸ್ಮಾರ್ಟ್ ಕ್ಲಾಸ್, ಬೆಂಚ್, ಶೌಚಗೃಹ ಮತ್ತು ವಿವಿಧ ಯೋಜನಗಳಿಗೆ ಮ್ಯಾಚಿಂಗ್ ಗ್ರ್ಯಾಂಟ್ , ಗ್ಲೋಬಲ್ ಗ್ರ್ಯಾಂಟ್ ಮೂಲಕ 50 ಕೋಟಿ ರೂ.ಗೂ ಅಧಿಕ ಹಣವನ್ನು ಸಮಾಜಮುಖಿ ಚಟುವಟಿಕೆಗಳಿಗೆ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಗಾರದ ಕಾರ್ಯದರ್ಶಿ ಡಾ. ಗುಡದಪ್ಪ ಕಸಬಿ. ಪ್ರಮೋಷನ್ ಕಮಿಟಿ ಚೇರ್ಮನ್ ಜಿ ವಿಜಯಕುಮಾರ್, ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಡಿ.ಕಿಶೋರ್ ಕುಮಾರ್, ಕಾರ್ಯದರ್ಶಿ ಡಾ. ಧನಂಜಯ ರಾಂಪುರ, ಜಿಲ್ಲಾ ಕಾರ್ಯದರ್ಶಿ ಡಿ.ಎಂ.ಜಲೇಂದ್ರ, ಪ್ರದೀಪ್.ಜಿ.ಎಸ್., ವಲಯ ಕಾರ್ಯದರ್ಶಿ ಜೆ.ರಾಧಾಕೃಷ್ಣ, ಶ್ರೀಕಾಂತ್, ಶಶಿಕಾಂತ್ ನಾಡಿಗ್, ಲಕ್ಷ್ಮಣ್ ಬಾಬು ಸುದ್ದಿಗೋಷ್ಠಿಯಲ್ಲಿದ್ದರು.