ಶಿವಮೊಗ್ಗ :- ಈ ಡಿಸೆಂಬರ್ ತಿಂಗಳನ್ನು ಠೇವಣಿ ಮಾಸಾಚರಣೆಯನ್ನಾಗಿ ಆಚರಿಸುತ್ತಿದ್ದು, ೧೦೦ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ ತಿಳಿಸಿದರು.
ಇಂದು ಡಿಸಿಸಿ ಬ್ಯಾಂಕ್ನಲ್ಲಿ ೨೦೨೪ರ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬಿಡುಗಡೆಗೊಳಿಸಿ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಸಕ್ತ ಸಾಲಿನ ಅಂತ್ಯಕ್ಕೆ ೧೨೯೩.೧೦ ಕೋಟಿ ಠೇವಣಿ ಸಂಗ್ರಹವಾಗಿದೆ. ಇದು ಬೆಂಗಳೂರು ವಿಭಾಗದಲ್ಲಿ ಮೊದಲ ಸ್ಥಾನವಾಗಿದೆ. ಹಾಗೆಯೇ ೧೨.೬೯ ಕೋಟಿ ನಿವ್ವಳ ಲಾಭ ಗಳಿಸಿ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದ್ದೇವೆ. ಬ್ಯಾಂಕ್ ವ್ಯವಸ್ಥೆಗೆ ಹೊಸ ರೂಪ ಕೊಡಲು ನಿರ್ಧರಿಸ ಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ರೈತರು ಕಾರ್ಮಿಕರಿಗೆ ವಿಶೇಷ ಹೊಸ ಯೋಜನೆಗಳನ್ನು ನೀಡಿದೆ ಎಂದರು.
ಸುಸ್ತಿ ಸಾಲಗಳನ್ನು ಪರಸ್ಪರ ಒಪ್ಪಂದದ ಮೂಲಕ ಮುಕ್ತಾಯ ಮಾಡಿಕೊಳ್ಳಲು ಒಂದು ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಕಾರ ಅಸಲು ಕಟ್ಟಿದರೆ ಸಾಕು, ಬಡ್ಡಿ ಯನ್ನು ಮನ್ನಾ ಮಾಡಬಹುದಾಗಿದೆ. ರಿಸರ್ವ್ ಬ್ಯಾಂಕ್ನ ಈ ಹೊಸ ಆದೇಶದಿಂದ ಮಾರ್ಚ್ ೩೦ರವರೆಗೆ ಸುಸ್ತಿದಾರರು ಈ ಒಡಂಬಡಿಕೆಯ (ಓಟಿಎಸ್) ಪರಸ್ಪರ ಹೊಂದಾಣಿಕೆ ಯ ಅವಕಾಶವನ್ನು ರೈತರು ಪಡೆಯಬಹುದಾಗಿದೆ ಎಂದರು.
ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಆದೇಶದಂತೆ ೨೦೨೩-೨೪ರಲ್ಲಿ ವಾರ್ಷಿಕ ಶೇ.೩ರ ಬಡ್ಡಿ ದರದಲ್ಲಿ ೧೫ ಲಕ್ಷದವರೆಗೆ ಮಧ್ಯಮಾವಧಿ ಸಾಲ ನೀಡಲಾಗುವುದು ಎಂದರು.
ಜಿಲ್ಲೆಯ ಗ್ರಾಹಕರ ಅನುಕೂಲಕ್ಕಾಗಿ ೧೦ ನೂತನ ಶಾಖೆಗಳನ್ನು ಜಿಲ್ಲಾದ್ಯಂತ ತೆರೆಯಲು ನಿರ್ಧರಿಸಲಾಗಿದೆ. ಹೊಳಲೂರು, ಬಾರಂದೂರು, ಕಲ್ಲಿಹಾಳ್, ಹೊಸ ನಗರ ಹಾಗೂ ಇತರೆ ತಾಲ್ಲೂಕುಗಳ ಹೋಬಳಿ ಮಟ್ಟದಲ್ಲಿ ಈ ಶಾಖೆಗಳನ್ನು ತೆರೆಯಲಾಗುವುದು. ಹಾಗೆಯೇ ಬ್ಯಾಂಕ್ ಮೊಬೈಲ್ ಆಫ್ನ್ನು ಬಿಡುಗಡೆ ಮಾಡಿದ್ದು, ಈ ಆಪ್ ಮೂಲಕ ಬ್ಯಾಂಕಿನ ಗ್ರಾಹಕರು ಖಾತೆಗಳ ಬ್ಯಾಲೆನ್ಸ್ ಮತ್ತು ಇತರೆ ಸಾಮಾನ್ಯ ಮಾಹಿತಿಗಳನ್ನು ಪಡೆಯ ಬಹುದಾಗಿದೆ. ಮತ್ತು ಆಧುನಿಕ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ಷಡಾಕ್ಷರಿ, ನಿರ್ದೆಶಕರಾದ ದುಗ್ಗಪ್ಪ ಗೌಡ, ಪರಮೇಶ್ ಎಂ.ಎಂ. ಸುದೀರ್ ಜಿ.ಎಂ., ಎಚ್.ಕೆ.ವೆಂಕಟೇಶ್, ದಶರಥಗೌಡ, ಸಹಕಾರ ಇಲಾಖೆ ಅಧಿಕಾರಿ ವಾಸುದೇವ್ ಇದ್ದರು.