ಶಿವಮೊಗ್ಗ :- ಜಿಲ್ಲೆಯ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿರುವ ರೈತರನ್ನು ಒಕ್ಕಲೆಬ್ಬಿಸಬಾರದು, ಭೂಮಿ ಒಡೆತನ ನೀಡಬೇಕು ಎಂದು ಆಗ್ರಹಿಸಿ ಇಂದು ಬಿಜೆಪಿ ನೇತೃತ್ವದಲ್ಲಿ ಯರಗನಾಳು, ಸದಾಶಿವಪುರ, ಮಲವಗೊಪ್ಪ ಮತ್ತು ಸುತ್ತಮುತ್ತ ಗ್ರಾಮಗಳ ರೈತ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನ ಸಭೆಯಲ್ಲಿ ಮಾತನಾಡಿದ, ಸಂಸದ ಬಿ.ವೈ.ರಾಘವೇಂದ್ರ, ತುಂಗಾಭದ್ರಾ ಶುಗರ್ ಫ್ಯಾಕ್ಟರಿ ೧೯೫೦ರಲ್ಲಿ ಪ್ರಾರಂಭವಾಗಿ ೧೯೮೪ರವರೆಗೆ ನಡೆದು ಅನಂತರ ೧೯೯೪ರಲ್ಲಿ ದೇವೀಶುಗರ್ಸ್ನವರಿಗೆ ವಯಿಸಲಾಗಿತ್ತು. ಅವರು ಎಸ್.ಬಿ.ಎಂ.ನಲ್ಲಿ ಸಾಲಪಡೆದು ತೀರಿಸಲು ವಿಫಲರಾಗಿದ್ದರಿಂದ ಮದ್ರಾಸ್ ಹೈಕೋರ್ಟ್ನಲ್ಲಿ ಲಿಕ್ವಿಡೇಶನ ಮಾಡಿ ಆದೇಶ ಕೂಡ ಕೊಡಿಸಲಾಗಿತ್ತು. ಆದರೆ, ೨೦೨೩ರ ಮೇ ತಿಂಗಳ ೧೧ರಂದು ಈ ಆದೇಶವನ್ನು ಕೋರ್ಟ್ ರದ್ದುಪಡಿಸಿದೆ ಎಂದರು.
ಈ ಜಗಗಳಲ್ಲಿ ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಹಕ್ಕುಪತ್ರ ಕೂಡ ಸಿಕ್ಕಿದೆ. ಮನೆಗಳಿವೆ, ಸರ್ಕಾರಿ ಕಚೇರಿಗಳಿವೆ, ಶಾಲೆ ದೇವಸ್ಥಾನಗಳು ಇವೆ, ಕೆಲವರು ಫಾರಂ ೫೦-೫೩ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜನವಸತಿ ಪ್ರದೇಶಗಳಿವೆ. ಈಗೀರುವಾಗ ಇದ್ದಕ್ಕಿದ್ದಂತೆ ಈಗ ಇವರೆಲ್ಲರನ್ನು ಒಕ್ಕಲೆಬ್ಬಿಸುವುದು ಯಾವ ನ್ಯಾಯ. ರೈತರು, ನಿವಾಸಿಗಳು ಇದರ ವಿರುದ್ಧ ಹೋರಾಡಬೇಕಾಗಿದೆ. ನಿಮ್ಮ ಹೋರಾಟಕ್ಕೆ ಬಿಜೆಪಿ ಪಕ್ಷ ಸದಾ ನಿಲ್ಲುತ್ತದೆ. ಜೀವ ಬಿಟ್ಟೇವು, ಜಗ ಬಿಡಲ್ಲ ಎಂಬ ನಿಮ್ಮ ಕೂಗಿಗೆ ನಾವು ಧ್ವನಿಯಾಗುತ್ತೇವೆ ಎಂದರು.
ಮದ್ರಾಸ್ ಹೈಕೋರ್ಟ್ ಕಂಪನಿಗೆ ಸೇರಿದ ಎಲ್ಲಾ ಆಸ್ತಿ ಹಾಗೂ ಜಮೀನನ್ನು ಹಸ್ತಾಂತರಿಸಬೇಕು. ಕಂಪನಿಯ ಹೆಸರಿಗೆ ರೈತರ ಜಮೀನುಗಳನ್ನು ವರ್ಗಾಯಿಸಬೇಕು ಎಂದು ಹೇಳಿದೆ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು.ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸದೇ, ಅವರಿಗೆ ಭೂಮಿ ಒಡೆತನ ನೀಡಬೇಕು. ಬೇಕಾದರೆ, ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಪರ್ಯಾಯ ಭೂಮಿಯನ್ನು ಸರ್ಕಾರದಿಂದಲೇ ಒದಗಿಸಲಿ ಎಂದರು.
ರೈತರ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಸಂಕಷ್ಟದ ಧ್ವನಿಗೆ ಬಿಜೆಪಿಯ ಸಹಾಯದ ದನಿ ಇರುತ್ತದೆ, ೧೨ ವಾರಗಳಲ್ಲಿ ತೆರವುಗೊಳಿಸಬೇಕು ಎಂದು ತಿಳಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಬಿಜೆಪಿ ಮುಖಂಡರು ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಟಿ.ಡಿ.ಮೇಘರಾಜ್, ಎಸ್.ದತ್ತಾತ್ರಿ, ಶಾಸಕ ಕೆ.ಬಿ. ಅಶೋಕ್ನಾಯ್ಕ್, ಜಗದೀಶ್, ರತ್ನಾಕರ್ ಶೆಣೈ, ಋಷಿಕೇಶ್ ಪೈ, ದಿವಾಕರ್ ಶೇಟ್ಟಿ, ರಾಜೇಶ್ ಕಾಮತ್, ವಿನ್ಸೆಟ್ ರೋಡ್ರಿಗಸ್, ಸಮಿತಿಯ ಮುಖಂಡರಾದ ಕೃಷ್ಣಪ್ಪ, ಮಹಾದೇವ್, ನಾಗೇಂದ್ರ, ಗಿರೀಶ್, ಯತೀರಾಜ್, ದೇವರಾಜ್, ಹನುಮಮ್ಮ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು, ಗ್ರಾಮಸ್ಥರು, ಕಾರ್ಮಿಕರು ಪಾಲ್ಗೊಂಡಿದ್ದರು.