ಶಿವಮೊಗ್ಗ : ಶುದ್ಧ ತುಂಗ ನದಿಯ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ೨೦೨೪ರ ಮಾರ್ಚ್ ೩೧ರೊಳಗೆ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳು ಮತ್ತು ಪರಿಸರ ತಜ್ಞರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದೇವೆ ಎಂದು ಶಾಸಕ ಚೆನ್ನಬಸಪ್ಪ ಹೇಳಿದ್ದಾರೆ.
ಇಂದು ತಮ್ಮ ಕರ್ತವ್ಯ ಭವನದಲ್ಲಿ ಶುದ್ಧ ತುಂಗಾ ನದಿಯ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು, ಪರಿಸರವಾದಿಗಳು ಮತ್ತು ಕರ್ನಾಟಕ ನೀರು ಸರಬರಾಜು ಮಂಡಳಿ, ಒಳಚರಂಡಿ ಮಂಡಳಿ ಮಹಾನಗರ ಪಾಲಿಕೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕೆ, ಸುದ್ದಿಗಾರರೊಂದಿಗೆ ಮಾತನಾಡಿದರು.
ತುಂಗಾ ನದಿ ಜಿಲ್ಲೆಯ ಜೀವನಾಡಿಯಾಗಿದ್ದು, ಇಡೀ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದೆ. ಇತ್ತೀಚೆಗೆ ತುಂಗೆಗೆ ಮಲೀನ ನೀರು ಸೇರುತ್ತಿದೆ. ನೀರಿನಲ್ಲಿ ಕುಡಿಯಲು ಯೋಗ್ಯವಲ್ಲದ ಅಂಶಗಳು ಸೇರಿಕೊಂಡಿದೆ. ದೇಹಕ್ಕೆ ಹಾನಿಕಾರಕವಾದ ಅಲ್ಯೂಮಿನಿಯಂ ಅಂಶವಿದೆ ಎಂಬ ವರದಿಯ ಹಿನ್ನಲೆಯಲ್ಲಿ ವಿಧಾನಸಭೆಯಲೂ ಕೂಡ ಕುಲಂಕುಷವಾಗಿ ಶುದ್ಧ ತುಂಗೆ ಮಲೀನವಾಗುತ್ತಿರುವ ಬಗ್ಗೆ ಸದನದ ಗಮನ ಸೆಳೆಯಲಾಗಿತ್ತು. ಆ ಬಳಿಕ ಸರ್ಕಾರ ಸದ್ಯಕ್ಕೆ ತುಂಗೆಯ ಶುದ್ಧಿಕರಣಕ್ಕೆ ಕೆಲವೊಂದು ಯೋಜನೆಗಳ ಅನುಷ್ಠಾನಕ್ಕೆ ತಾತ್ಕಾಲಿಕವಾಗಿ ೪೦ ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಕಳೆದ ೩೦ ವರ್ಷಗಳಿಂದ ಕುಡಿಯುವ ನೀರಿಗೆ ಮತ್ತು ಯುಜಿಡಿಗಾಗಿ ಅನೇಕ ಯೋಜನೆಗಳನ್ನು ಮಾಡುತ್ತ ಬಂದಿದ್ದೇವೆ. ನಗರ ಬೆಳೆದಿದೆ. ಹಳೆಯ ಯುಜಿಡಿ ಹಾಳಾಗಿದೆ. ಇನ್ನೂ ಶೇ.೨೦ರಷ್ಟು ಯುಜಿಡಿ ಸಂಪರ್ಕ ಬಾಕಿಯಿದೆ. ಮಲೀನ ನೀರು ಸುಮಾರು ೧೬೩ ಕಡೆ ಚಾನಲ್ಗಳಿಗೆ ಸೇರುತ್ತಿದೆ ಎಂದು ಗುರುತಿಸಿದ್ದೇವೆ. ಈಗಾಗಲೇ ಮೂರು ನೀರು ಶುದ್ಧೀಕರಣ ಘಟಕಗಳು ಮತ್ತು ಹತ್ತು ವೆಟ್ವೆಲ್ಗಳ ಮೂಲಕ ಯುಜಿಡಿ ನೀರಿನ್ನು ಸಂಗ್ರಹಿಸಿ ಶುದ್ದೀಕರಿಸುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ. ಅದೇ ರೀತಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕ ನಿರ್ವಹಣೆಗೆ ೨.೬೮ ಕೋಟಿ ಅನುದಾನ ಬಂದಿದೆ. ಅಡಿಗೆ ಮನೆಯ, ಬಚ್ಚಲಿನ ನೀರು ಮತ್ತು ಯುಜಿಡಿ ನೀರು ಎಲ್ಲವನ್ನು ಗುರುತಿಸಿ ಸರಾಗವಾಗಿ ಎಲ್ಲವೂ ಯುಜಿಡಿಗೆ ಬರುವಂತೆ ಕ್ರಮಕೈಗೊಳ್ಳಲಾಗುವುದು. ನಾಗರೀಕರ ಸಹಕಾರ ಬಹಳ ಮುಖ್ಯ ಎಂದರು.
ಎಲ್ಲಿ ಬೇಕಲ್ಲಿ ಕಸ ಬಿಸಾಡುವುದು, ಆಸ್ಪತ್ರೆ ತ್ಯಾಜ್ಯಗಳು, ತ್ಯಾಜ್ಯಗಳನ್ನು ನದಿಗೆ ಬಿಸಾಡುವುದು ಎಲ್ಲವನ್ನು ಕೂಡ ಅಧಿಕಾರಿಗಳು ಗಮನಿಸಿದ್ದಾರೆ. ಅಲ್ಲಲ್ಲಿ ಫಲಕಗಳನ್ನು ಕೂಡ ಅಳವಡಿಸಿ ಜಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡಲಾಗುವುದು ಎಂದರು.
ಗುಂಡಪ್ಪಶೆಡ್ ಮತ್ತು ಆಟೋ ಕಾಂಪ್ಲೆಕ್ಸ್ನಿಂದ ನೀರು ಚಾನಲ್ಗೆ ಸೇರದಂತೆ ವೆಟ್ವೆಲ್ ನಿರ್ಮಿಸಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೋಟೆ ರಸ್ತೆ, ಸೀಗೆಹಟ್ಟಿಯ ಭಾಗದ, ಮಲೀನ ನೀರು ಶುದ್ಧಿಕರಣ ಘಟಕಕ್ಕೆ ಹೋಗುವಂತೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಕೆಲವೆಡೆ ಚಾನಲ್ಗೆ ಕೆರೆಗೆ ಮಲೀನ ನೀರು ಸೇರುತ್ತಿರುವುದು ಗಮನಕ್ಕೆ ಬಂದಿದೆ. ಇಡೀ ನಗರವನ್ನು ನಾಲ್ಕು ಭಾಗವಾಗಿ ವಿಂಗಡಿಸಿ ಮಲೀನ ನೀರು ತುಂಗೆಗೆ ಸೇರದಂತೆ ಮಾರ್ಚ್. ೩೧ರೊಳಗೆ ಅಂತಿಮ ಕ್ರಿಯಾ ಯೋಜನೆಯನ್ನು ರೂಪಿಸಿಕೊಳ್ಳುತ್ತೇವೆ ಎಂದರು.
ಪಾಲಿಕೆ ಆಯುಕ್ತ ಮಾಯಣ್ಣಗೌಡ, ಪರ್ಯಾವರಣ ಟ್ರಸ್ಟ್ ಹಾಗೂ ನಿರ್ಮಲ ತುಂಗಾ ಅಭಿಯಾನದ ಪ್ರಮುಖರಾದ ಬಿ.ಎಂ. ಕುಮಾರಸ್ವಾಮಿ, ಬಾಲಕೃಷ್ಣನಾಯ್ಡು, ಎಂ.ಶಂಕರ್, ಕೆ.ಯುಡಬ್ಲ್ಯೂಎಸ್ ಅಧಿಕಾರಿಗಳಾದ ಸಿದ್ದಪ್ಪ, ಒಳಚರಂಡಿ ಎಡಬ್ಲ್ಯೂಇ ಮಿಥುನ್, ಎಸ್.ವಿ. ಅಶೋಕ್ ಕುಮಾರ್, ಕಾಂತೇಶ್ ಕದರಮಂಡಲಗಿ ಹಾಗೂ ಇನ್ನಿತರ ಅಧಿಕಾರಿ ಉಪಸ್ಥಿತರಿದ್ದರು.