ಶಿವಮೊಗ್ಗ :- ವೈಕುಂಠ ಏಕಾದಶಿ ನಿಮಿತ್ತ ಶಿವಮೊಗ್ಗ ನಗರದಲ್ಲಿರುವ ವೆಂಕಟೇಶ್ವರ ದೇವಾಲಯಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಭಕ್ತರ ಮಹಾಪೂರ ದೇವರ ದರ್ಶನ ಪಡೆಯಿತು.
ಭಗವಾನ್ ಶ್ರೀ ಮಹಾವಿಷ್ಣು ಮಾರ್ಗಶಿರ ಮಾಸದ ಏಕದಶಿಯಾದ ಇಂದು ಭೂಲೋಕಕ್ಕೆ ಇಳಿದು ಬಂದು ಭಕ್ತಾಧಿಗಳ ಇಷ್ಟಾರ್ಥ ಸಿದ್ದಿ ಮಾಡುತ್ತಾನೆ ಎಂಬ ಪ್ರತೀತಿ ಇದ್ದು, ಬಹುತೇಕ ದೇಗುಲಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಯನ್ನು ಏರ್ಪಡಿಸಲಾಗಿತ್ತು.
ಭದ್ರಾವತಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಸಪ್ತದ್ವಾರಗಳ ವೈಕುಂಠ ದರ್ಶನ ವಿಶೇಷ ಅಲಂಕಾರ ಮಾಡಲಾಗಿತ್ತು.
ಶಿವಮೊಗ್ಗ ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ, ಜಿ.ಎಸ್.ಕೆ.ಎಂ. ರಸ್ತೆಯ ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಲಕ್ಷ್ಮೀ ವೆಂಕಟರಮಣ ದೇವಮಂದಿರ, ವೆಂಕಟೇಶ ನಗರದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಅಂಡಾಳ್ಗೋಷ್ಟಿ ಸಮಿತಿಯ ಅಶ್ವಥ್ನಗರದ ದೇವಗಿರಿ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ನವುಲೆಯ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ, ಜಯನಗರ ಶ್ರೀ ರಾಮಮಂದಿರದಲ್ಲಿ ವಿಶೇಷ ಅಲಂಕಾರ ಮಾಡಲಾಯಿತು.
ಬೆಳಿಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. ಎಲ್ಲ ದೇವಾಲಯಗಳಲ್ಲೂ ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.