ಶಿವಮೊಗ್ಗ :- ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿರುವ ಬೆನ್ನಲ್ಲೇ ಇಂದು ಮತ್ತೆ ಅವರು ತಾವು ನೀಡಿರುವ ಹೇಳಿಕೆ ಪುನರುಚ್ಚಿಸಿದ್ದು, ಈ ರೀತಿ ಕಾನೂನು ತರುವ ಕುರಿತು ಕೇಂದ್ರದ ನಾಯಕರಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.
ಇಂದು ಶಿವಮೊಗ್ಗ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ದೇಶದ ರಾಷ್ಟ್ರಪತಿಗಳ ಬಗ್ಗೆಯೂ ಗೌರವ ಇಲ್ಲ. ಮುಖ್ಯಮಂತ್ರಿಗಳು ತಮ್ಮ ಭಾಷೆಯನ್ನು ಸ್ವಲ್ಪ ಸುಧಾರಿಸಿಕೊಳ್ಳಬೇಕು. ಕಾನೂನು ತರುವ ಕುರಿತು ಕೇಂದ್ರದ ನಾಯಕರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ತಿಹಾರ್ ಜೈಲಿನಿಂದ ಬಂದಿರುವವರು ಇಂದು ಉಪ ಮುಖ್ಯಮಂತ್ರಿ ಆಗಿದ್ದಾರೆ. ಹತ್ತು ಸಾವಿರ ರೂ ದಂಡ ಕಟ್ಟಿರುವವರು ಮುಖ್ಯಮಂತ್ರಿ ಆಗಿದ್ದಾರೆ. ದೇಶದ್ರೋಹಿ ರಕ್ಷಣೆ ಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ನಾನು ಇಲ್ಲಿಯವರೆಗೆ ಒಂದು ಬಾರಿಯೂ ದಂಡ ಕಟ್ಟಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ರೀತಿ ನಾನು ಜೈಲಿಗೆ ಹೋಗಿ ಬಂದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು. ಆರ್ಎಸ್ಎಸ್ ಬಗ್ಗೆ ನೀಡಿದ ಹೇಳಿಕೆ ಸಿಎಂ ವಾಪಸ್ ಪಡೆಯಲಿ. ಸಿದ್ದರಾಮಯ್ಯನವರೇ ನೀವು ಮೊದಲು ಶ್ವೇತಪತ್ರ ಹೊರಡಿಸಿ. ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ ಇಂತಹ ಹೇಳಿಕೆ ಬೇಡ. ಮೊದಲು ಶ್ವೇತಪತ್ರ ಹೊರಡಿಸಿ. ರಾಜ್ಯ ಸರ್ಕಾರ ದಿವಾಳಿ ಆಗಿ ಹೋಗಿದೆ. ರಾಷ್ಟ್ರಭಕ್ತರನ್ನ ಕಂಡರೇ ಕಾಂಗ್ರೆಸ್ ನವರಿಗೆ ಅಲರ್ಜಿ ಎಂದು ಕಿಡಿ ಕಾರಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಟಿ.ಡಿ. ಮೇಘರಜ್, ಚಂದ್ರಶೇಖರ್, ಅಣ್ಣಪ್ಪ ಇದ್ದರು.