ಶಿವಮೊಗ್ಗ :- ಪ್ರತಿಷ್ಟಿತ ತುಂಗಾಭದ್ರ ಸಕ್ಕರೆ ಕಾರ್ಖಾನೆ ರೈತರ ಸಮಸ್ಯೆಗಳನ್ನು ರಾಜಕೀಯ ಬಿಟ್ಟು ಬಗೆಹರಿಸಿ ಅವರಿಗೆ ನ್ಯಾಯ ಕೊಡಿಸಿ ಎಂದು ಶಿವಮೊಗ್ಗ ತಾಲ್ಲೂಕು ಸಕ್ಕರೆ ಕಾರ್ಖಾನೆ ಕಾರ್ಮಿಕರ ಮತ್ತು ರೈತರ ಭೂ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ಎಂ.ಬಿ. ಕೃಷ್ಣಪ್ಪ ಮತ್ತು ಪದಾಧಿಕಾರಿಗಳು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ, ಕೃಷ್ಣಪ್ಪ ತುಂಗಾ ಭದ್ರ ಸಕ್ಕರೆ ಕಾರ್ಖಾನೆಯ ಮಾಲೀಕರು ಕಳೆದ ೫೫-೬೦ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರನ್ನು ಮನೆ ಕಟ್ಟಿಕೊಂಡು ವಾಸವಾಗಿರುವ ನಿವಾಸಿಗಳನ್ನು , ಕಾರ್ಮಿಕರನ್ನು ಒಕಲ್ಲೆಬ್ಬಿಸಲು ಮುಂದಾಗಿದೆ. ಇದನ್ನು ನಮ್ಮ ಸಮಿತಿ ಖಂಡಿಸುತ್ತದೆ. ಒಕ್ಕಲೆಬ್ಬಿಸಲು ಮುಂದಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ಕಾರ್ಖಾನೆಗೆ ಸಂಬಂಧಿಸಿದಂತೆ ರೈತರ ಮತ್ತು ಕಾರ್ಮಿಕರ ಉಳಿವಿಗಾಗಿ ಹಲವು ಹೋರಾಟಗಳು ನಡೆಯುತ್ತ ಬಂದಿವೆ. ಈಗ ಯಾವುದೇ ರಾಜಕಾರಣವು ಬೇಡ ಎಲ್ಲರೂ ಒಟ್ಟಾಗಿ ರೈತರಿಗೆ ಸಾಗುವಳಿ ಚೀಟಿ ಮತ್ತು ಕಾರ್ಮಿಕರಿಗೆ ಹಾಗೂ ಅಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ನಿವಾಸಿಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಸರ್ಕಾರ ಇವರೆಲ್ಲರು ಒಟ್ಟಾಗಿ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು. ವಿಳಂಬ ಮಾಡಬಾರದು ಎಂದರು.
ಕಾರ್ಖಾನೆ ಮುಚ್ಚಿಹೋದ ನಂತರ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ನ್ಯಾಯಾಲಯದ ನಡುವೆ ಹೋರಾಟ ನಡೆಯುತ್ತಲೇ ಇತ್ತು. ಇದರಲ್ಲಿ ೩೦ ವರ್ಷಕ್ಕೆ ಲೀಸ್ಗೆಹಾಕಿದ್ದ ಭೂಮಿಯನ್ನು ಸರ್ಕಾರ ವಾಪಾಸ್ಸು ಪಡೆದಿದೆ. ವಾಪಸ್ಸು ಪಡೆದ ಜಗದಲ್ಲಿ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಹಲವು ವರ್ಷಗಳ ನಂತರ ತಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು ಕಾರ್ಖಾನೆ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟವನ್ನು ನಡೆಸುತ್ತಲೇ ಬಂದಿತ್ತು. ಹಲವು ಬದಲಾವಣೆಯ ನಡುವೆ ಸದಾಶಿವಪುರಕ್ಕೆ ಸೇರಿದ ಸುಮರು ೬೪೫ ಎಕರೆ ಪ್ರದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಅದು ರೈತರ ಪರವಾಗಿದೆ ಎಂದರು.
ಹೀಗೆ ನ್ಯಾಯಾಲಯದಲ್ಲಿ ಕೇಸು ಇರುವಾಗಲೇ ಕಾರ್ಖಾನೆಯ ಆಡಳಿತ ಮಂಡಳಿ ಕೆಲವರ ಚಿತಾವಣಿಯಿಂದ ಒಕ್ಕಲೆಬ್ಬಿಸಲು ಹೊರಟಿರುವುದು ಸರಿಯಲ್ಲ. ಕಾರ್ಖಾನೆಯ ಕೆಲ ಘೋಷಿತ ಕಾರ್ಮಿಕರ ಮುಖಂಡರು ಕೂಡ ಆಡಳಿತ ಮಂಡಳಿಯ ಕಡೆಯೇ ಇದ್ದಾರೆ. ಆಗಾದರೆ ಕಾರ್ಮಿಕರ ಮನೆಗಳನ್ನು ಮುಂದೆ ನಿಂತು ಕೆಡವಿದ್ದೇಕೆ. ಕಾರ್ಮಿಕರಿಗೆ ನ್ಯಾಯ ಬೇಕಾದರೆ ಸಿಗಲಿ, ಆದರೆ ರೈತರಿಗೂ ನ್ಯಾಯ ಸಿಗಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.
ಕೇವಲ ೫೦ಎಕರೆ ಮಾತ್ರ ಸಕ್ಕರೆ ಕಾರ್ಖಾನೆಗೆ ಸೇರಿದ್ದಾಗಿದೆ. ಆದರೆ, ಸಾವಿರಾರು ಎಕರೆಯನ್ನು ನುಂಗಲು ಆಡಳಿತ ಮಂಡಳಿ ವ್ಯವಸ್ಥಿತ ಸಂಚು ರೂಪಿಸುತ್ತಿದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ರೈತರಿಗೆ ಮತ್ತು ನಿಜವಾದ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಎಂ.ಬಿ. ನಾರಾಯಣ, ರಾಘವನ್, ಡಿ.ಬಿ.ಹನುಮನಾಯ್ಕ, ಕುಮಾರ್, ಮಹಾದೇವ್, ಗಿರೀಶ್, ಸುರೇಶ ನಾಯಕ, ಶಿವು, ಪ್ರಕಾಶ್, ಮಂಜುನಾಥ್ ಮುಂತಾದವರು ಇದ್ದರು.