ಶಿವಮೊಗ್ಗ :- ಪತಂಜಲಿ ಸಂಸ್ಥೆಯ 26ನೇ ವರ್ಷದ ಬೆಳ್ಳಿಹಬ್ಬ, ೫೩೬ನೇ ಶ್ರೀ ಕನಕದಾಸರ ಜಯಂತಿಯ ಅಂಗವಾಗಿ ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ, ತರಬೇತಿ ಕಾರ್ಯಾಗಾರ, ಹಾಲುಮತ ಸಂಸ್ಕೃತಿ ಕನಕ ಕಲಾ ವೈಭವ ಶ್ರೀ ಕನಕದಾಸರ ಗೀತಾಗಾಯನ ನೃತ್ಯರೂಪಕ ಅಭಿಯಾನ ಆಯೋಜಿಸಲಾಗಿದೆ ಎಂದು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಪತಂಜಲಿ ಜೆ. ನಾಗರಾಜ್ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ, ಪತಂಜಲಿ ಕರ್ನಾಟಕ ಜನಪದ ಕಲಾ ಕೇಂದ್ರ, ಪತಂಜಲಿ ಕರ್ನಾಟಕ ಹಾಲುಮತ ಜನಪದ ಕಲಾ ಕೇಂದ್ರ, ಪತಂಜಲಿ ಕನಕ ಮಹಿಳಾ ಸಂಘ ಆಶ್ರಯದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಡಿ. 24ರಂದು ಬೆಳಿಗ್ಗೆ 9ರಿಂದ 12ರವರೆಗೆ ಕುವೆಂಪು ರಂಗಮಂದಿರದಲ್ಲಿ ೨೬ ಕಲಾ ತಂಡದ ಕಲಾವಿದರ ಮೂಲಕ ವೈವಿಧ್ಯಮಯ ಶ್ರೀ ಕನಕದಾಸರ ಕೀರ್ತನೋತ್ಸವ ಏರ್ಪಡಿಸಲಾಗಿದೆ. ವಿಶೇಷ ಆಕರ್ಷಣೆ ಶ್ರೀ ಕನಕದಾಸರ ಪಾತ್ರದಲ್ಲಿ ಸಾವಿರ ಹಾಡುಗಳ ಸರದಾರ ಕಲಾವಿದ ಎಂ. ಪೂವಯ್ಯ ಇವರಿಂದ ಶ್ರೀ ಕನಕದಾಸರ ಗೀತಾಗಾಯನ ನೃತ್ಯರೂಪಕ, ಪ್ರತಿಭಾವಂತ ಬಾಲ ಕಲಾವಿದೆ ಕು. ಎನ್. ಯೋಗೀತಾ ಇವರಿಂದ ಜನಪದ ನೃತ್ಯರೂಪಕ, ಕು. ಸೃಷ್ಠಿ ಕೆ.ವೈ. ಹರಿಹರ ಇವರಿಂದ ಯೋಗ ನೃತ್ಯರೂಪಕ ಏರ್ಪಡಿಸಲಾಗಿದೆ ಎಂದರು.
ಮಧ್ಯಾಹ್ನ 12 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪತಂಜಲಿ ಸಂಸ್ಥೆ ಗೌರವಾಧ್ಯಕ್ಷ ಎಂ.ಈಶ್ವರಪ್ಪ ನವುಲೆ ವಹಿಸುವರು. ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದ ಪೂರ್ಯನಾಯ್ಕ, ಡಿ.ಎಸ್. ಅರುಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಎಂ. ಶ್ರೀಕಾಂತ್, ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಕಾಲಜನಿ ಗೋಪಾಲಸ್ವಾಮಿ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ, ಪತಂಜಲಿ ಗುರು ಕೇಶವಚತುರ ಹೆದ್ದೂರು ಭಾಗವಹಿಸುವರು ಎಂದರು.
ಪತಂಜಲಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಂ.ಎನ್. ಸುಂದರ್ರಾಜ್ ಮಾತನಾಡಿ, ಪತಂಜಲಿ ಮತ್ತು ಪ್ರಕೃತಿ ಸಂಸ್ಥೆಯು ಕಳೆದ 24ವರ್ಷಗಳಿಂದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶ್ರೀ ಕನಕದಾಸರ ಜಯಂತ್ಯೋತ್ಸವವನ್ನು ಕೇವಲ ಒಂದು ದಿನಕ್ಕೆ ಸೀಮಿತ ಮಾಡದೇ ನಿರಂತರವಾಗಿ ಯಶಸ್ವಿಯಾಗಿ ನಡೆಸಿಕೊಂಡು ಮಾದರಿ ಸಂಸ್ಥೆಯಾಗಿ ಬೆಳೆದಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ. ಪಿ.ಬಾಲಪ್ಪ, ಎಂ. ಪೂವಯ್ಯ, ಎ.ಹೆಚ್. ಶ್ಯಾಮಲಾ, ಪರಿಸರ ಸಿ. ರಮೇಶ್, ಸುಶೀಲ ಭವಾನಿ ಶಂಕರ್ರಾವ್, ಭವಾನಿ ಶಂಕರ್ರಾವ್, ಎ.ಪಿ. ಕೋಟೇಶ್ ಇನ್ನಿತರರು ಉಪಸ್ಥಿತರಿದ್ದರು.